ಮಂಗಳೂರು; ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದ ಅಣ್ಣ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಕಟೀಲು ಸಮೀಪದ ನಿಡ್ಡೋಡಿಯಲ್ಲಿ ಶನಿವಾರ ನಡೆದಿದೆ. ಕಟೀಲು ಸಮೀಪದ ನಿಡ್ಡೋದಿ ಮುದಲಾಡಿಗುತ್ತು ನಿವಾಸಿ ಪ್ರವೀಣ್ ಶೆಟ್ಟಿ (49) ನಿಧನರಾದ ಹಿನ್ನೆಲೆ ಅವರ ಅಣ್ಣ ಸಾಯಿಪ್ರಸಾದ್ ಶೆಟ್ಟಿ (52) ಗುಜರಾತ್ ನಿಂದ ಬಂದಿದ್ದರು. ಹೀಗೆ ಬಂದವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಪ್ರವೀಣ್ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶುಕ್ರವಾರ ರಾತ್ರಿ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಗುಜರಾತಿನಲ್ಲಿರುವ ಅಣ್ಣ ಸಾಯಿಪ್ರಸಾದ್ ಅವರಿಗೆ ಸಂಬಂಧಿಕರು ಕರೆ ಮಾಡಿ ವಿಷಯ ತಿಳಿಸಿದ್ದರು. ಈ ಹಿನ್ನಲೆ ರೈಲಿನ ಮೂಲಕ ಊರಿಗೆ ಆಗಮಿಸಿದ್ದರು. ಆದರೆ ಅವರು ಮನೆಗೆ ತಲುಪುವ ಮೊದಲೇ ಅಂದರೆ ಶನಿವಾರ ಬೆಳಗ್ಗೆ ಪ್ರವೀಣ್ ಅವರು ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.
ಶನಿವಾರ ಸಂಜೆ 5.30ರ ಸುಮಾರಿಗೆ ಸಾಯಿಪ್ರಸಾದ್ ಮನೆಗೆ ತಲುಪಿ ತಮ್ಮನ ಅಂತ್ಯಸಂಸ್ಕಾರಕ್ಕೆ ತಯಾರಿ ಆರಂಭಿಸಿದ್ದರು. ಅದು ವರೆಗೆ ಆರೋಗ್ಯವಾಗಿಯೇ ಇದ್ದ ಅವರು ಕುಸಿದು ಬಿದ್ದಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಅವರು ಕೂಡ ನಿಧನ ಹೊಂದಿದ್ದಾರೆ. ಸಾಯಿಪ್ರಸಾದ್ ಅವರು ಪತ್ನಿ, ಪುತ್ರ, ಪುತ್ರಿಯನ್ನು ಹಾಗೂ ಪ್ರವೀಣ್ ಅವರು ಪತ್ನಿಯನ್ನು ಅಗಲಿದ್ದಾರೆ. ಸಹೋದರರಿಗೆ ತಾಯಿ ಮತ್ತು ಓರ್ವ ಸಹೋದರಿ ಇದ್ದಾರೆ. ಸಾಯಿಪ್ರಸಾದ್ ಅವರ ಪತ್ನಿ, ಮಕ್ಕಳು ಗುಜರಾತಿನಿಂದ ಬಂದ ಬಳಿಕ ಅಂತ್ಯಸಂಸ್ಕಾರ ನೆರವೇರಿದೆ.


