ಮಂಗಳೂರು: ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಕೊಡಿಸುವುದಾಗಿ ಹೇಳಿ ಹಾಸನ ಜಿಲ್ಲೆ ಆಲೂರಿನ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 40 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ ಜಿಲ್ಲೆ ಆಲೂರಿನ ಕೃಷ್ಣ ಗೌಡ(66) ಎಂಬವರು ಈ ಬಗ್ಗೆ ದೂರು ನೀಡಿದ್ದು, ಬೆಂಗಳೂರಿನ ನಾಗಭೂಷಣ್, ವಾಮಂಜೂರಿನ ನಾರಾಯಣ ಸ್ವಾಮಿ, ಮೂಲ್ಕಿಯ ಮಹೇಶ್ ಭಟ್, ಮೂಡುಬಿದಿರೆಯ ದಿನೇಶ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೃಷ್ಣಗೌಡರ ಪುತ್ರ ಸಿ.ಕೆ.ದರ್ಶನ್ ಮತ್ತು ಬೆಂಗಳೂರಿನ ಮೊಹಮ್ಮದ್ ಶರೀಫ್ ಸೇರಿದಂತೆ ಹಲವರು ಬೆಂಗಳೂರಿನಲ್ಲಿ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ವೇಳೆ ಪರಸ್ಪರ ಪರಿಚಿತರಾಗಿದ್ದರು. 2019ರಲ್ಲಿ ದರ್ಶನ್ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಆ ವೇಳೆ ಮೊಹಮ್ಮದ್ ಶರೀಫ್, ತನ್ನ ನೆರೆಮನೆಯ ನಿರ್ಮಲಾ ವೆಂಕಟಸ್ವಾಮಿ ಎಂಬುವರ ಮನೆಯಲ್ಲಿ ಪೂಜೆಗೆ ಬರುತ್ತಿದ್ದ ಮೂಲ್ಕಿಯ ಮಹೇಶ್ ಭಟ್ ಎಂಬುವರ ಬಳಿ ಸರ್ಕಾರಿ ಹುದ್ದೆ ಪಡೆಯುವ ಬಗ್ಗೆ ಮಾತನಾಡಿದ್ದರು. ಆಗ ಮಹೇಶ್, ನನಗೆ ಸಿಬಿಐನಲ್ಲಿ ನಾರಾಯಣಸ್ವಾಮಿ ಎನ್ನುವವರ ಪರಿಚಯ ಇದೆ. ಅವರಿಗೆ ರಾಜಕೀಯದವರ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಪರಿಚಯ ಇದೆ, ಕೆಲಸ ಮಾಡಿಸಿಕೊಡುತ್ತಾರೆ ಎಂದಿದ್ದ.
ಅದರಂತೆ ಶರೀಫ್ ಹಾಗೂ ಇತರರು ಸಿಬಿಐ ಅಧಿಕಾರಿ ಸೋಗಿನಲ್ಲಿದ್ದ ನಾರಾಯಣಸ್ವಾಮಿಯನ್ನು ಮಹೇಶ್ ಮನೆಯಲ್ಲಿ ಭೇಟಿ ಮಾಡಿದ್ದರು. ಕೆಲಸ ಬೇಕಾದರೆ ಬೆಂಗಳೂರಿನ ನಾಗಭೂಷಣ್ ಹಾಗೂ ಮೂಡಬಿದಿರೆಯ ದಿನೇಶ್ ಮೂಲಕ ಮಾತನಾಡಬೇಕು. ಆದರೆ ಅವರು ಹೇಳಿದಷ್ಟು ಹಣದ ವ್ಯವಸ್ಥೆ ಮಾಡಬೇಕು ಎಂದು ನಾರಾಯಣಸ್ವಾಮಿ ನಂಬಿಸಿದ್ದ. ಕೃಷ್ಣಗೌಡರು ಪುತ್ರನ ಕೆಲಸಕ್ಕಾಗಿ 8 ಲಕ್ಷ ರೂ.ವನ್ನು ನಾರಾಯಣಸ್ವಾಮಿಗೆ ನೀಡಿದ್ದರು. ಉದ್ಯೋಗದ ಆದೇಶ ಪ್ರತಿ ಕೇಳಿದಾಗ ಆರೋಪಿಗಳು ವಿಳಂಬವಾಗುತ್ತದೆ ಎಂದಿದ್ದರು. ಕೆಲ ಸಮಯದ ಬಳಿಕ ನಕಲಿ ಆದೇಶಪತ್ರ ತೋರಿಸಿದ್ದು, ಕೃಷ್ಣಗೌಡ ಮತ್ತೆ 32 ಲಕ್ಷ ರೂ. ನೀಡಿದ್ದರು. ನೇಮಕಾತಿ ಕುರಿತು ಕೇಳಿದಾಗ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.