ಬಂಟ್ವಾಳ: ಶಾಲಾ ಕಾಲೇಜುಗಳ ಅಭಿವೃದ್ಧಿಗೂ ದೇಗುಲದಷ್ಟೇ ಮಹತ್ವ ನೀಡಿದಾಗ, ಶೈಕ್ಷಣಿಕ ಕೇಂದ್ರಗಳ ನೈಜ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ಹೇಳಿದ್ದಾರೆ.
ಅವರು ಕಾಮಾಜೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 75 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೆಮಿನಾರ್ ಹಾಲ್ನ ನೂತನ ಕಟ್ಟಡಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸರ್ಕಾರಿ ಸ್ವಾಮ್ಯದಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ಸಮುದಾಯದ ಸಹಭಾಗಿತ್ವದೊಡನೆ ಅಭಿವೃದ್ಧಿ ಮಾಡಲು ಸಾಧ್ಯ ಎನ್ನುವುದಕ್ಕೆ ದಡ್ಡಲಕಾಡು ಶಾಲೆ ಉದಾಹರಣೆ ಎಂದ ಅವರು, ಪ್ರತಿಯೊಂದಕ್ಕೂ ಸರ್ಕಾರವನ್ನೇ ಕಾಯದೆ ಸ್ವಯಂ ಆಸಕ್ತಿಯೊಡನೆ ಅಭಿವೃದ್ಧಿ ಸಮಿತಿ ಕ್ರಿಯಾಶೀಲವಾಗಬೇಕು , ಶಾಸಕನನೆಲೆಯಲ್ಲಿ ತಾನು ಎಂದೆಂದಿಗೂ ನಿಮ್ಮ ಜೊತೆಗೆ ಇರುವುದಾಗಿ ಅವರು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರೈಟ್ಸ್ ಸಂಸ್ಥೆಯ ಅನೀಶ್, ಗುತ್ತಿಗೆದಾರರ ಪ್ರತಿನಿಧಿ ಪ್ರಖ್ಯಾತ್ ಯೆಯ್ಯಾಡಿ, ಶೋಭಾ ಹರೀಶ್ಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಡಾ.ಸತೀಶ್ ಗಟ್ಟಿ ಸ್ವಾಗತಿಸಿದರು. ನಿಕಟಪೂರ್ವ ಪ್ರಾಂಶುಪಾಲ ಅಜೆಕ್ಕಳ ಗಿರೀಶ್ ಭಟ್ ಉಪಸ್ಥಿತರಿದ್ದರು.