ಪ್ರವಾದಿ ಮುಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಿದ ಬಿಜೆಪಿ ಮಾಜಿ ವಕ್ತಾರೆ ನೂಪೂರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕೆ ದುಷ್ಟರಿಂದ ಕತ್ತು ಸೀಳಿ ಕೊಲೆಗೈಯಲ್ಪಟ್ಟ ದರ್ಜಿ ಕನ್ಹಯ್ಯಾ ಲಾಲ್ ಪ್ರಕರಣ ಸಂಬಂಧ 32 ಐಪಿಎಸ್ ಅಧಿಕಾರಿಗಳನ್ನು ರಾಜಸ್ಥಾನ ಸರ್ಕಾರ ವರ್ಗಾವಣೆ ಮಾಡಿದೆ.
ಘಟನೆ ಸಂಬಂಧ ಭಾರೀ ಟೀಕೆಗಳು ಕೇಳಿ ಬಂದ ಬಳಿಕ ಗೆಹ್ಲೋಟ್ ಸರ್ಕಾರದಿಂದ ಈ ನಿರ್ಧಾರ ತೆಗೆದುಕೊಂಡಿದೆ. ಉದಯಪುರದ ಇನ್ಸ್ಪೆಕ್ಟರ್ ಜನರಲ್ ಗಾಗೂ ಉದಯಪುರದ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ವರ್ಗ ಮಾಡಿ ಸರ್ಕಾರ ಆದೇಶಿಸಿದೆ.
ನೂಪೂರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕೆ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದ ಕನ್ಹಯ್ಯಾ ಲಾಲ್ಗೆ ಹಲವು ಮಂದಿ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಕನ್ಹಯ್ಯಾ ದೂರು ಕೂಡ ನೀಡಿದ್ದರು. ಆದರೆ ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕನ್ಹಯ್ಯಾ ಹತ್ಯೆಯಾದ ಬಳಿಕ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು. ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹಿರಿಯ ಅಧಿಕಾರಿಗಳನ್ನು ಗೆಹ್ಲೋಟ್ ಸರ್ಕಾರ ಸಾಮೂಹಿಕವಾಗಿ ಎತ್ತಂಗಡಿ ಮಾಡಿದೆ.