ಬೆಳ್ತಂಗಡಿ: ತಾಲೂಕು ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ತನ್ನ ಹುಟ್ಟುಹಬ್ಬದ ಪ್ರಯುಕ್ತ ನೇತ್ರ ದಾನ ಮಾಡುವ ಪ್ರತಿಜ್ಞೆಯನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆ ಯಲ್ಲಿ ತಮ್ಮ ಅಮೂಲ್ಯವಾದ ನೇತ್ರಗಳನ್ನು ದಾನ ಮಾಡುವ ಪ್ರತಿಜ್ಞಾ ವಿಧಿಗೆ ಸಹಿ ಹಾಕಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಈಗಿನ ಯುವ ಪೀಳಿಗೆ ಬೇರೆ ಬೇರೆ ಘಟನೆಗಳಲ್ಲಿ ಭಾಗಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ನೇತ್ರದಾನ, ರಕ್ತದಾನ ಮಾಡುವುದರ ಮುಖಾಂತರ ಬಡವರಿಗೆ ಹಾಗೂ ಕಷ್ಟ ಸಂಕಷ್ಟದಲ್ಲಿರುವ ರೋಗಿಗಳಿಗೆ ದಾನ ಮಾಡುವುದರ ಮುಖಾಂತರ ಯುವಕರು ಈಗಿನ ಸಾಮಾಜಿಕ ನೆಲೆಯಲ್ಲಿ ತಿದ್ದಿ ನಡೆಯುವ ಒಂದು ಉದಾಹರಣೆಯಾಗಿ ಮೂಡಿ ಬರಬೇಕು. ಕಣ್ಣುದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ತನ್ಮೂಲಕ ಅಂಧರ ಬಾಳಲ್ಲಿ ಬೆಳಕು ತರುವ ಪುಟ್ಟ ಪ್ರಯತ್ನವನ್ನು ನಾವೆಲ್ಲಾ ಮಾಡಬೇಕಾಗಿದೆ ಎಂದರು.
ಸಮಾಜದಲ್ಲಿ ನೇತ್ರದಾನ ಮಾಡುವವರಿಗೆ ಪ್ರೇರಣೆಯಾಗಲಿ ಎನ್ನುವ ದೃಷ್ಟಿಯಿಂದ ನೇತ್ರದಾನ ಮಾಡುವ ಪ್ರತಿಜ್ಞೆ ಕೈಗೊಂಡಿರುವ ಅಭಿನಂದನ್ ಹರೀಶ್ ಕುಮಾರ್ ಅವರ ಈ ಮಾದರಿ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ.