ಕಾರವಾರ: ಪ್ರವಾಸಕ್ಕೆಂದು ಬಂದು ಈಜಲು ಸಮುದ್ರಕ್ಕೆ ತೆರಳಿದ್ದ ಐವರು ಪ್ರವಾಸಿಗರ ಪೈಕಿ ಓರ್ವ ನೀರು ಪಾಲಾದ ಘಟನೆ, ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.ಇನ್ನು ನಾಲ್ವರು ಯುವಕರನ್ನು ರಕ್ಷಣೆ ಮಾಡಲಾಗಿದೆ.
ತುಮಕೂರು ಮೂಲದ ರಂಗನಾಥ ರಂಗಸಾಮಯ್ಯ (19) ಮೃತ ಯುವಕ. ತುಮಕೂರಿನಿಂದ 10 ಜನ ಸೇರಿ ಪ್ರವಾಸಕ್ಕೆ ಆಗಮಿಸಿದ್ದರು. ದೇವರ ದರ್ಶನ ಪಡೆದು ಸಮುದ್ರದಲ್ಲಿ ಈಜಾಡಲು ತೆರಳಿದಾಗ ಒಮ್ಮೆಲೆ ಬಂದ ಅಲೆಗೆ ಐವರು ಯುವಕರು ಕೊಚ್ಚಿಕೊಂಡು ಹೋಗಿದ್ದಾರೆ.ತಕ್ಷಣ ಜೊತೆಯಲ್ಲಿದ್ದವರು ಕೂಗಿಕೊಂಡಾಗ ಸಮೀಪದಲ್ಲೇ ಇದ್ದ ಪ್ರವಾಸಿಗರಿಗೆ ಬೋಟಿಂಗ್ ಕರೆದುಕೊಂಡು ತೆರಳುವ ಸಿಬ್ಬಂದಿಗಳಾದ ಶೇಖರ ಹರಿಕಾಂತ, ನಿತ್ಯಾನಂದ ಹರಿಕಾಂತ ಎಂಬುವವರು ಬೋಟ್ ಮೂಲಕ ತೆರಳಿ ನಾಲ್ವರನ್ನು ಹರಸಾಹಸ ಮಾಡಿ ಕರೆ ತಂದಿದ್ದಾರೆ.
ದಡಕ್ಕೆ ತರುವ ವೇಳೆಯಲ್ಲಿ ಓರ್ವ ಮಾತ್ರ ಅಲೆಗಳಿಗೆ ಸಿಕ್ಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ. ತಕ್ಷಣ ಆತನನ್ನು ಆಂಬುಲೆನ್ಸ್ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.