ಕೊಡಗು; ಸ್ನೇಹಿತನ ಮದುವೆಗೆಂದು ಬೆಂಗಳೂರಿನಿಂದ ಬಂದಿದ್ದ ಯುವಕನೊಬ್ಬ ಲಾಡ್ಜ್ ನಲ್ಲಿ ತಂಗಿದ್ದ ವೇಳೆ ಮೃತಪಟ್ಟಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.
ಬೆಂಗಳೂರಿನ ರಾಮಮೂರ್ತಿ ನಗರದ ಕೃಷ್ಞಪ್ಪ ಎಂಬವರ ಪುತ್ರ ಮಧು ಎಂಬುವವರು ಗೆಳೆಯರೊಂದಿಗೆ ನಿನ್ನೆ ವಿರಾಜಪೇಟೆ ಸಮೀಪದ ಚೆಂಬೆಬೆಳ್ಳೂರಿನಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿ ವಿರಾಜಪೇಟೆ ಜೈನರ ಬೀದಿಯ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ಬೆಂಗಳೂರಿಗೆ ಹಿಂತಿರುಗಲೆಂದು ಸ್ನೇಹಿತರ ತಂಡವು ಬೇಗನೇ ಎದ್ದು ಅಣಿಯಾಗಿತ್ತು. ಆದರೆ 9 ಗಂಟೆಯಾದರೂ ಇವರೊಂದಿಗೆ ಇದ್ದ ಮಧು ಮಲಗಿದಲ್ಲಿಂದ ಮಾತ್ರ ಮಿಸುಕಾಡಲಿಲ್ಲ. ಇದರಿಂದ ಗಾಬರಿಗೊಂಡ ಸಹವರ್ತಿಗಳು ಲಾಡ್ಜ್ ಕೆಳ ಭಾಗದಲ್ಲಿರುವ ಖಾಸಗಿ ಕ್ಲಿನಿಕ್ ನ ವೈದ್ಯರಿಗೆ ವಿಷಯ ಮುಟ್ಟಿಸಿದ್ದಾರೆ. ವೈದ್ಯರು ಬಂದು ನೋಡಿದಾಗ ಮಧು ಚಿರನಿದ್ರೆಗೆ ಜಾರಿರುವುದು ಖಚಿತವಾಗಿದೆ.
ನಂತರ ಲಾಡ್ಜ್ ವ್ಯವಸ್ಥಾಪಕರು ವಿರಾಜಪೇಟೆ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಠಾಣಾಧಿಕಾರಿ ಜಗದೀಶ್ ದೂಳ್ ಶೆಟ್ಟಿ ಅವರು ಆಗಮಿಸಿ ಮುಂದಿನ ಕ್ರಮ ಕೈಗೊಂಡು ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಬೆಂಗಳೂರಿನಿಂದ ಬಂದಿದ್ದ ಸಂಬಂಧಿಕರಿಗೆ ಮೃತ ಶರೀರವನ್ನು ಹಸ್ತಾಂತರಿಸಲಾಯಿತು.


