ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ಪ್ರತ್ಯೇಕ ರಾಜ್ಯ ಪ್ರವಾಸ ಬೇಡಿಕೆಗೆ ಹೈಕಮಾಂಡ್ ರೆಡ್ ಸಿಗ್ನಲ್ ನೀಡಿದೆ. ಮುಖ್ಯಮಂತ್ರಿ ತಂಡದ ನೇತೃತ್ವ ವಹಿಸಿಕೊಂಡು ರಾಜ್ಯ ಪ್ರವಾಸ ಮಾಡಲು ಸೂಚನೆ ನೀಡಲಾಗಿದ್ದು, ಅಲ್ಲದೇ ಕಟೀಲ್ ತಂಡದ ಪ್ರವಾಸದಲ್ಲಿಯೂ ಸೇರಿಕೊಳ್ಳಲು ತಿಳಿಸಿದೆ.
ಮೂರು ತಂಡಗಳಲ್ಲಿ ರಾಜ್ಯ ಪ್ರವಾಸಕ್ಕೆ ಸಿದ್ದತೆ ನಡೆಸಿದ್ದ ಬಿಜೆಪಿ ಎರಡು ತಂಡಕ್ಕೆ ಪ್ರವಾಸವನ್ನು ಸೀಮಿತಗೊಳಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಂದು ತಂಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಂದು ತಂಡದಲ್ಲಿ ರಾಜ್ಯ ಪ್ರವಾಸ ಮಾಡಬೇಕು ಎನ್ನುವ ನಿರ್ಧಾರ ಮಾಡಲಾಗಿತ್ತು. ಯಡಿಯೂರಪ್ಪಗೆ ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗಳಲ್ಲಿ ಸ್ಥಾನ ಕಲ್ಪಿಸುತ್ತಿದ್ದಂತೆ ಯಡಿಯೂರಪ್ಪ ಅವರ ನೇತೃತ್ವದಲ್ಲಿಯೂ ಮತ್ತೊಂದು ತಂಡ ಪ್ರವಾಸ ಮಾಡಬೇಕು ಎನ್ನುವ ನಿರ್ಧಾರ ಮಾಡಲಾಯಿತು.
ಆದರೆ ಬಿಜೆಪಿ ಹೈಕಮಾಂಡ್ ಸರ್ಕಾರ ಮತ್ತು ಪಕ್ಷ ಪ್ರತಿನಿಧಿಸುವಂತೆ ಕೇವಲ ಎರಡು ತಂಡಗಳು ಮಾತ್ರ ಪ್ರವಾಸ ಮಾಡಬೇಕು ಎಂದು ಸೂಚಿಸಿದೆ. ಹೀಗಾಗಿ ಮೂರು ತಂಡಗಳು ಮತ್ತೆ ಎರಡು ತಂಡಕ್ಕೆ ಸೀಮಿತವಾಗುವಂತಾಯಿತು.