ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಗುರುರಾಜ್ ಪಾರಾಗಿದ್ದಾರೆ.
ನಟ ಯತಿರಾಜ್ ಪ್ರಯಾಣಿಸುತ್ತಿದ್ದ ಕಾರು ಚಿಕ್ಕಬಳ್ಳಾಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ 7ರ ಅಗಲಗುರ್ಕಿ ಬಳಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ನುಜ್ಜು-ಗುಜ್ಜಾಗಿದೆ. ಚಿಕ್ಕಬಳ್ಳಾಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗನ ಕಾರು ಹೇಗೆ ಅಪಘಾತಕ್ಕೀಡಾಯ್ತು ಎಂಬುದರ ಬಗ್ಗೆ ಜಗ್ಗೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
”ಕೊರೋನ ಬಂದಾಗಿನಿಂದ ಹೊರ ಹೋಗಿಲ್ಲಾ ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಹೊರ ಹೋದ ಮಗ ಯತಿರಾಜ,ಅವನು ಪ್ರತಿಬಾರಿ ಅವನ ಇಷ್ಟದ ರಸ್ತೆ bnglr to ಚಿಕ್ಕಬಳ್ಳಾಪುರ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆಬಿದ್ದಿದೆ!ರಾಯರದಯೇ ಹಾಗು ನಿಮ್ಮ ಶುಭಹಾರೈಕೆ ಯತಿರಾಜನಿಗೆ ಸಣ್ಣ ಗಾಯವು ಇಲ್ಲ!” ಎಂದು ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳಿದ್ದು
ಪ್ರತ್ಯಕ್ಷದರ್ಶಿಗಳು ಹೇಳುವಂತೆ, ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು ಹತ್ತು ಅಡಿ ಮೇಲೆ ಹಾರಿ ಉರುಳಿ ಬಿದ್ದಿದೆ. ಇದಕ್ಕೆ ಕಾರು ಅತಿವೇಗವಾಗಿ ಚಲಿಸಿದ್ದೇ ಕಾರಣ. ರಭಸವಾಗಿ ಗುದ್ದಿದರೂ ಸಣ್ಣಪುಟ್ಟ ಗಾಯವಾಗಿದೆಯೆಂದರೆ ಅವರನ್ನು ಕಾರ್ನಲ್ಲಿದ್ದ ಏರ್ಬ್ಯಾಗ್ ಕಾಪಾಡಿದೆ. ಒಂದುವೇಳೆ ಕಾರಿನಲ್ಲಿ ಆ ಸೌಲಭ್ಯ ಇಲ್ಲದೇ ಇದ್ದರೆ ಹೆಚ್ಚು ಪೆಟ್ಟಾಗುವ ಸಂಭವ ಇತ್ತು, ಕಾರಿನಲ್ಲಿದ್ದ ಏರ್ಬ್ಯಾಗ್ನಿಂದ ಜಗ್ಗೇಶ್ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಾವು ಕಣ್ಣಾರೆ ನೋಡಿದ್ದನ್ನು ಹೇಳಿದ್ದಾರೆ.