ಬೆಂಗಳೂರು, ಜೂ.25- ಹೆಡ್ ಕಾನ್ಸ್ಟೇಬಲ್ ಒಬ್ಬರು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಸಂಪಿಗೆಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುಪ್ರಸಾದ್ (38) ಆತ್ಮಹತ್ಯೆ ಮಾಡಿಕೊಂಡಿರುವ ಹೆಡ್ಕಾನ್ಸ್ಟೆಬಲ್.
ಗುರುಪ್ರಸಾದ್ ಮೂಲತಃ ಕನಕಪುರ ಬಳಿಯ ಬೇವೂರು ಗ್ರಾಮದವರಾಗಿದ್ದಾರೆ. ಯಲಹಂಕ 4ನೇ ಹಂತದಲ್ಲಿನ ಮನೆಯಲ್ಲಿ ಗುರುಪ್ರಸಾದ್ ಜತೆ ಜಗಳವಾಡಿಕೊಂಡಿದ್ದ ಪತ್ನಿ ಎರಡು ದಿನಗಳ ಹಿಂದೆ ತವರಿಗೆ ಹೋಗಿದ್ದರು. ಇದರಿಂದ ನೊಂದ ಗುರುಪ್ರಸಾದ್ ಅಂದು ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ರಾತ್ರಿ ಅಕ್ಕಪಕ್ಕದ ನಿವಾಸಿಗಳಿಗೆ ವಿಷಯ ತಿಳಿದು ಬಂದಿದ್ದು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಅಂಬೇಡ್ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.