ಹೈದರಾಬಾದ್: ಮಹಿಳೆಯೊಬ್ಬಳು ಹತ್ತನೇ ಮದುವೆಯಾಗಲು ತಯಾರಿ ನಡೆಸುತ್ತಿದ್ದದ್ದು ಗೊತ್ತಾಗಿ ಆಕೆಯ ಒಂಬತ್ತನೇ ಪತಿ ಬರ್ಭರವಾಗಿ ಕೊಲೆ ಮಾಡಿರುವ ಘಟನೆ ಹೈದರಾಬಾದಿನ ಪಹದಿ ಶರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
30 ವರ್ಷದ ವರಲಕ್ಷ್ಮೀ ಮೃತ ಮಹಿಳೆ. ಈಕೆಯ 9ನೇ ಪತಿ ನಾಗರಾಜನನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ನಾಗರಾಜು ಕಳೆದ 3 ವರ್ಷಗಳಿಂದ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜಲ್ಲಪಲ್ಲಿ ಮುನ್ಸಿಪಲ್ ಏರಿಯಾದಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.
ಅದೇ ಏರಿಯಾದ ಪೆಟ್ರೋಲ್ ಬಂಕ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವಾಹಿತ ಮಹಿಳೆ ವರಲಕ್ಷ್ಮಿಯ ಪರಿಚಯ ನಾಗರಾಜುವಿಗೆ ಆಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ತಿರುಗಿದೆ. ಆದರೆ ಅದೇ ಸಮಯದಲ್ಲಿ ವರಲಕ್ಷ್ಮಿ 8 ಮದುವೆಯಾಗಿತ್ತು. ಹಿಂದಿನ 7 ಗಂಡಂದಿರನ್ನು ದೂರ ಮಾಡಿ 8ನೇ ಗಂಡ ಮತ್ತು ಆತನಿಗೆ ಹುಟ್ಟಿದ್ದ ಮಗನೊಂದಿಗೆ ಜೀವನ ಸಾಗಿಸುತ್ತಿದ್ದಳು.
ನಾಗರಾಜು ಮತ್ತು ವರಲಕ್ಷ್ಮೀ ನಡುವಿನ ಪ್ರೀತಿ ಗಾಢವಾಗುತ್ತಿದ್ದಂತೆ ಆಕೆ ತನ್ನ ಪತಿ ಮತ್ತು ಮಗನನ್ನು ಬಿಟ್ಟು ಎರಡು ವರ್ಷಗಳ ಹಿಂದೆ ನಾಗರಾಜು ಜತೆ ವಿವಾಹವಾಗಿದ್ದಳು. ಇದಾದ ಕೆಲ ದಿನಗಳವರೆಗೆ ನಾಗರಾಜು ಜೊತೆ ಅನೋನ್ಯವಾಗಿದ್ದ ವರಲಕ್ಷ್ಮಿ, ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದಾಳೆ. ನಾಗರಾಜು ಕೆಲಸಕ್ಕೆಂದು ಹೊರ ಹೋದಾಗ ವರಲಕ್ಷ್ಮೀ ಪರ ಪುರುಷರೊಂದಿಗೆ ಸಂಬಂಧ ಬೆಳೆಸಿರುವುದು ಹಾಗೂ ಅವರೊಂದಿಗೆ ತುಂಬಾ ಸಲುಗೆಯಿಂದಿರುವುದು ನಾಗರಾಜುಗೆ ಗೊತ್ತಾಗಿದೆ.
ಈ ವಿಚಾರವಾಗಿ ಗಂಡನೊಂದಿದಿಗೆ ಕ್ಯಾತೆ ತೆಗೆದಿದ್ದ ವರಲಕ್ಷ್ಮೀ ಮತ್ತೊಬ್ಬನನ್ನು ಮದುವೆಯಾಗಲು ತಯಾರಾಗಿದ್ದಳು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಪದೇಪದೆ ಜಗಳ ಮಾಡುತ್ತಿದ್ದಳು.
ಹೀಗೆ ಇಬ್ಬರ ನಡುವೆ ಪ್ರತಿದಿನ ಜಗಳ ನಡೆಯುತ್ತಿರುವಾಗ ನಿನ್ನೆ ಬೆಳಗ್ಗೆ ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ, ತಾಳ್ಮೆ ಕಳೆದುಕೊಂಡ ನಾಗರಾಜು, ವರಲಕ್ಷ್ಮೀ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ತಾನೇ ಪಹದಿ ಶರೀಫ್ ಪೊಲೀಸ್ ಠಾಣೆಗೆ ಬಂದು ಶರಣಾದನು ಎಂದು ಇಲ್ಲಿಯ ಸಬ್ಇನ್ಸ್ಪೆಕ್ಟರ್ ಕುಮಾರಸ್ವಾಮಿ ತಿಳಿಸಿದರು.