ಬೆಳ್ತಂಗಡಿ: ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ವ್ಯಕ್ತಿಯೊಬ್ಬರ ಮೇಲೆ ಕಾಡು ಕೋಣಗಳ ಹಿಂಡೊಂದು ದಾಳಿ ನಡೆಸಿದ ಘಟನೆ ಬೆಳಾಲಿನ ಪೆರಿಯಡ್ಕ ಬಳಿ ನಡೆದಿದೆ.
ಉಜಿರೆಯಿಂದ ಕೆಲಸ ಮುಗಿಸಿಕೊಂಡು ಆಗಸ್ಟ್ 23 ರಂದು ಸಂಜೆ 7 ಗಂಟೆ ಸುಮಾರಿಗೆ ಲೋಕೇಶ್ ಎಂಬವರು ತನ್ನ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿರುವಾಗ ಪೆರಿಯಡ್ಕ ಎಂಬಲ್ಲಿ ಕಾಡು ಕೋಣವೊಂದು ಅಡ್ಡ ಬಂದಿದೆ. ತಕ್ಷಣ ತನ್ನ ಸ್ಕೂಟರ್ ನಿಲ್ಲಿಸಿದಾಗ ಸುಮಾರು ಕಾಡು ಕೋಣಗಳ ಹಿಂಡು ಇವರ ವಾಹನದ ಹಿಂದೆ ಓಡಿ ಬರುತ್ತಿತ್ತು. ಇದನ್ನು ಗಮನಿಸಿದ ಅವರು ಮುಂದೆ ಹೋಗಲು ಪ್ರಯತ್ನಿಸಿದಾಗ ಕಾಡುಕೋಣವೊಂದು ಇವರಿಗೆ ದಾಳಿ ನಡೆಸಿದೆ.
ದಾಳಿಯಿಂದ ವಾಹನ ಸಹಿತ ಅವರು ಸ್ವಲ್ಪ ದೂರ ಎಸೆಯಲ್ಪಟ್ಟು ಬಿದ್ದಿದ್ದಾರೆ. ನಂತರ ಮತ್ತೊಂದು ಕಾಡು ಕೋಣವೂ ದಾಳಿಗೆ ಮುಂದಾದಾಗ ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದಾರೆ. ಕಾಡು ಕೋಣ ದಾಳಿಯಿಂದ ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಹೆಲ್ಮೆಟ್ ಇದುದರಿಂದ ಹೆಚ್ಚಿನ ಅಪಾಯವಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಕಾಡು ಕೋಣಗಳ ಹಾವಳಿಯಿಂದಾಗಿ ಕೃಷಿ ಹಾಳಾಗುತ್ತಿದ್ದು ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಪಟಾಕಿ ಅಥವಾ ಶಬ್ದ ಮಾಡಿ ಓಡಿಸುವಂತೆ ಉಡಾಫೆ ಉತ್ತರ ನೀಡಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಅದಲ್ಲದೆ ಕಳೆದ ನಾಲ್ಕು ವರ್ಷಗಳ ಹಿಂದೆ ವೃದ್ಧೆಯೊಬ್ಬರು ಕಾಡು ಕೋಣ ದಾಳಿಯಿಂದ ಎರಡು ತಿಂಗಳು ಚಿಕಿತ್ಸೆ ಪಡೆದು ಸಾವನ್ನಪ್ಪಿದ್ದಾರು. ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿ ವ್ಯಕ್ತಿಯೊಬ್ಬರಿಗೂ ಕಾಡು ಕೋಣ ದಾಳಿ ನಡೆಸಿದ್ದು ಅವರು ಕೈ ಮುರಿತಕ್ಕೊಳಗಾಗಿದ್ದಾರೆ. ಹಗಲು ಹೊತ್ತಿನಲ್ಲೂ ಆತ್ತಿತ್ತ ರಸ್ತೆಗಳಲ್ಲಿ ಓಡಾಡುವ ಕಾಡು ಕೋಣಗಳಿಂದಾಗಿ ಸ್ಥಳೀಯ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲೂ ಪೋಷಕರು ಹೆದರುವಂತಾಗಿದೆ.ಬೈಕಿನಲ್ಲಿ ಅಥವಾ ಆಚೀಚೆ ಹೋಗಲು ಹೆದರಿಕೆಯಾಗುತ್ತಿದೆ.
ಈಗಾಗಲೇ ನಾವು ಅರಣ್ಯ ಇಲಾಖೆಗೆ ಸ್ಥಳೀಯ ಪಂಚಾಯಿತ್ ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ರೀತಿ ನಿರ್ಲಕ್ಷ್ಯ ವಹಿಸಿದರೆ ನಮ್ಮ ಸ್ಥಿತಿ ಏನಾಗಬೇಕು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಪ್ರಾಣ ಹಾನಿ ಸಂಭವಿಸುವ ಮೊದಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಮ್ಮ ನೋವನ್ನು ಸ್ಥಳೀಯರು ಹೊರಹಾಕುತ್ತಿದ್ದಾರೆ.ಇನ್ನಾದರೂ ಸಂಬಂಧಪಟ್ಟ ಇಲಾಖೆಯು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಆತಂಕದಲ್ಲಿರುವ ಸ್ಥಳೀಯರ ಭಯವನ್ನು ಹೋಗಲಾಡಿಸಬೇಕಾಗಿದೆ.