ಉಡುಪಿ: ಜಿಲ್ಲೆ ರಚನೆಗೊಂಡು 25 ವರ್ಷ ಪೂರ್ಣಗೊಂಡ ಉಡುಪಿಯ ವೈಶಿಷ್ಟ್ಯಗಳಲ್ಲಿ ಮಹತ್ವದ್ದು, ದೇಶದ ಯಾವುದೇ ರಾಜ್ಯ ಹಾಗೂ ಜಿಲ್ಲೆಗಿಂತ ಅಧಿಕವಾಗಿರುವ ಈ ಪರಂಪರೆ ಮುಂದುವರಿದುಕೊಂಡು ಹೋಗಲು ಜಿಲ್ಲೆಯ ಎಲ್ಲಾ ಜಾಗೃತ ಜನತೆ ಸಹಕರಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಭೌಗೋಳಿಕವಾಗಿ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ಉಡುಪಿ ಜಿಲ್ಲೆಗೆ 25 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾದ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ರಾಜ್ಯಪಾಲರು ಮಾತನಾಡುತಿದ್ದರು.
ಕರ್ನಾಟಕದ ಸಮುದ್ರದ ತೀರದಲ್ಲಿರುವ ಉಡುಪಿ ಜಿಲ್ಲೆ, ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಕಲಾಸಂಸ್ಕೃತಿಯ ಸಮೃದ್ಧಿಗಾಗಿ ಪ್ರಸಿದ್ಧವಾದುದು. ಇಲ್ಲಿ ಸೌಹಾರ್ದತೆಯ ವಾತಾವರಣವಿದೆ. ಪ್ರಾಕೃತಿಕ ಸೌಂದರ್ಯ ಹಾಗೂ ಮಂದಿರಗಳಿಗೆ ಪ್ರಸಿದ್ಧವಾದುದು. ಧರ್ಮಸಂಸ್ಕೃತಿಗಳ ಪಾವನ ಕ್ಷೇತ್ರದ ಬೆಳವಣಿಗೆಯಲ್ಲಿ ಜಾಗರೂಕ ಜನಪ್ರತಿನಿಧಿಗಳ ಪಾತ್ರ ಹಿರಿದಾಗಿದೆ ಎಂದು ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಜಿಲ್ಲೆಯ ಪರಂಪರೆ, ಇತಿಹಾಸ, ಧರ್ಮ ಮತ್ತು ಸಂಸ್ಕೃತಿ ಜೀವಂತವಾಗಿರುವಲ್ಲಿ ಜಿಲ್ಲೆಯ ಜನತೆಯ ಪ್ರಾತ್ರ ಹಿರಿದಾಗಿದ್ದು, ಇದರಿಂದಾಗಿ ಜಿಲ್ಲೆ ಪ್ರಗತಿಯ ಪಥದಲ್ಲಿದೆ. ಇದೇ ರೀತಿಯ ಪ್ರಗತಿ ಮುಂದುವರಿದರೆ ಉಡುಪಿ, ರಾಜ್ಯದ ಅಗ್ರಗಣ್ಯ ಜಿಲ್ಲೆ ಎನಿಸಿಕೊಳ್ಳುವ ಸಂಪೂರ್ಣ ವಿಶ್ವಾಸ ತನಗಿದೆ ಎಂದು ಗೆಹ್ಲೋಟ್ ನುಡಿದರು.
ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯ ಮೂಲಕ ಅನೇಕ ಯೋಜನೆಗಳು ಉಡುಪಿ ಜಿಲ್ಲೆಗೆ ಬರಲು ಸಿದ್ಧವಾಗಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆ ಇನ್ನಷ್ಟು ವೇಗದ ಪ್ರಗತಿ ಸಾಧಿಸುವುದರಲ್ಲಿ ಸಂಶಯವಿಲ್ಲ ಎಂದು ರಾಜ್ಯಪಾಲರು ವಿಶ್ವಾಸ ವ್ಯಕ್ತಪಡಿಸಿದರು.
1997ರ ಆ.25ರಂದು ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿ ಅಂದಿನ ಜನರ ಬಹುಕಾಲದ ಕನಸನ್ನು ನನಸು ಮಾಡಿದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಸ್ತುತ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ರಜತೋತ್ಸವ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.