ವಿಟ್ಲ; ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬಾರಿ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸುವ ಸಲುವಾಗಿ ವಿಟ್ಲ ಹೊರವಲಯದಲ್ಲಿ ತೋಟದ ನಡುವೆ ಕಟ್ಟವೊಂದನ್ನು ನಿರ್ಮಿಸಿ ನೀರನ್ನು ಹಿಡಿದಿಟ್ಟುಕೊಳ್ಳಲಾಗಿದೆ.
ಒಟ್ಟು 18 ವಾರ್ಡ್ಗಳಿರುವ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ, ಕಳೆದ ವರ್ಷ ಮಾರ್ಚ್ 27ರಿಂದ ಜೂನ್ ತಿಂಗಳವರೆಗೆ 16 ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಪ್ರತಿದಿನ 3,000 ಲೀಟರ್ ಸಾಮರ್ಥ್ಯದ ಎರಡು ಪಿಕಪ್ ವಾಹನಗಳಲ್ಲಿ ವಾರ್ಡ್ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿತ್ತು. 1,000ಕ್ಕೂ ಹೆಚ್ಚು ಟ್ರಿಪ್ ನೀರು ನೀಡಲಾಗಿದೆ. ಹೀಗಾಗಿ, ಈ ಬಾರಿ ಮುನ್ನೆಚ್ಚರಿಕೆವಹಿಸಿ, ಜಲಮೂಲಗಳನ್ನು ಭದ್ರಗೊಳಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಪ.ಪಂ ಮುಖ್ಯಾಧಿಕಾರಿ ಗೋಪಾಲ ನಾಯ್ಕ, ‘60 ಕೊಳವೆಬಾವಿಗಳು, 20 ತೆರೆದ ಬಾವಿಗಳನ್ನು ಬಳಸಿ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಈ ವರ್ಷ ಹೊಸದಾಗಿ ಸೇರಾಜೆ, ನೆಲ್ಲಿಗುಡ್ಡೆಯಲ್ಲಿ ಎರಡು ಕೊಳವೆಬಾವಿ ಕೊರೆಯಲಾಗಿದೆ. ಕೆಲವು ದಿನಗಳ ಹಿಂದೆ ಮಳೆಯಾದ ಕಾರಣ ಈ ಬಾರಿ ಮಾರ್ಚ್ವರೆಗೆ ನೀರಿನ ಸಮಸ್ಯೆ ಬರಲಾರದು. ಬಹುತೇಕ ಮನೆಗಳಲ್ಲಿ ತೆರೆದಬಾವಿ ಇದೆ. ಮನೆಗಳ ಬಾವಿ ನೀರು ಬತ್ತಿ ಹೋದರೆ, ಪಟ್ಟಣ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇನ್ನು ಪಂಚಾಯಿತಿ ಕಡೆಯಿಂದ ಈಗಾಗಲೇ ನೀರಿನ ಸಮಸ್ಯೆ ಎದುರಾಗಬಹುದಾದ ಸ್ಥಳಗಳ ಹೆಸರನ್ನು ಪಟ್ಟಿ ಮಾಡಲಾಗಿದೆ. ಮೇಗಿನಪೇಟೆ, ಒಕ್ಕುಡ ದರ್ಭೆ, ಸೇರಾಜೆ, ಸೀಗೆಬಲ್ಲೆ, ವಿಟ್ಲ ಪೇಟೆ ಇವಿಷ್ಟು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು. ಈ ಸಮಸ್ಯೆ ಎದುರಾದಲ್ಲಿ ಟ್ಯಾಂಕರ್ ಮೂಲಕ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಇನ್ನು ಊರಿನ ಕಟ್ಟಗಳು ಜಲ ತಿಜೋರಿ ಇದ್ದಂತೆ. ಹಳ್ಳ, ತೊರೆಗಳಿಗೆ ಕಟ್ಟ ನಿರ್ಮಿಸಿದರೆ, ಬೇಸಿಗೆಯಲ್ಲಿ ಕೃಷಿಭೂಮಿ, ಸುತ್ತಲಿನ ಬಾವಿಗಳಿಗೆ ನೀರಿನ ಸಮಸ್ಯೆಯಾಗುವುದಿಲ್ಲ. ಪಟ್ಟಣದ ಸುತ್ತಮುತ್ತ ಕಲ್ಲಕಟ್ಟ, ಕೂಟೇಲು, ವಕ್ಕೆತ್ತೂರು, ಬಳಂತಿಮೊಗರು ಸೇರಿ ಒಟ್ಟು ನಾಲ್ಕು ಕಡೆಗಳಲ್ಲಿ ಕಟ್ಟ ನಿರ್ಮಿಸಲಾಗಿದೆ. ಎರಡು ಕಡೆಗಳಲ್ಲಿ ಜಲಮಂಡಳಿ ನೆರವಾದರೆ, ಇನ್ನೆರಡು ಕಡೆಗಳಲ್ಲಿ ರೈತರೇ ನಿರ್ಮಿಸಿದ್ದಾರೆ ಎಂದು ಅವರು ವಿವರಿಸಿದರು.