ಮಂಗಳೂರು: ಕೈಗಾರಿಕಾ ವಲಯದ ಭೂಸ್ವಾಧೀನಕ್ಕೆ ಸಂಬಂಧಿಸಿ ಸರ್ವೇ ಬಂದ ಸಿಬ್ಬಂದಿಯನ್ನು ಡಿವೈಎಫ್ಐ ನಿಯೋಗದವರು ತರಾಟೆಗೆ ತೆಗೆದುಕೊಂಡ ಘಟನೆ ನಿನ್ನೆ ನಡೆದಿದೆ. ‘ಬಳ್ಳುಂಜೆ, ಕೊಲ್ಲೂರು ಹಾಗೂ ಉಳೆಪಾಡಿ ಗ್ರಾಮಗಳಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಸಂಬಂಧಿಸಿದ ಸರ್ವೆ ಕಾರ್ಯವನ್ನು ಖಾಸಗಿ ಏಜೆನ್ಸಿಯಿಂದ ನಡೆಸಲಾಗುತ್ತಿದೆ. ಸರ್ವೆ ನಡೆಸುವ ಸಿಬ್ಬಂದಿ, ಈ ಕುರಿತ ಸರ್ಕಾರಿ ಆದೇಶವನ್ನಾಗಲಿ, ಗುರುತಿನ ಚೀಟಿಯನ್ನಾಗಲೀ ಹೊಂದಿಲ್ಲ’ ಎಂದು ಡಿವೈಎಫ್ಐ ಆಕ್ಷೇಪ ವ್ಯಕ್ತಪಡಿಸಿದೆ.
‘ಭೂಸ್ವಾಧೀನಕ್ಕೆ ಸಂಬಂಧಿಸಿ ಜಿಲ್ಲಾಡಳಿತವು ತಪ್ಪು ದಾರಿ ಅನುಸುರಿಸುತ್ತಿರುವುದು ಖಂಡನೀಯ’ ಎಂದು ಸಂಘಟನೆ ಹೇಳಿದೆ. ಕೈಗಾರಿಕಾ ವಲಯ ಸ್ಥಾಪನೆಗೆ ಫಲವತ್ತಾದ ಕೃಷಿ ಭೂಮಿಯೂ ಸೇರಿದಂತೆ ಸಾವಿರಕ್ಕೂ ಅಧಿಕ ಭೂಸ್ವಾಧೀನ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಕಲೆಹಾಕಲು ಬಳ್ಳುಂಜೆ, ಕೊಲ್ಲೂರು ಗ್ರಾಮಗಳಿಗೆ ನಮ್ಮ ನಿಯೋಗ ಶುಕ್ರವಾರ ಭೇಟಿ ಕೊಟ್ಟಿತ್ತು. ಕೈಗಾರಿಕಾ ವಲಯಕ್ಕೆ ಭೂಮಿ ಕಳೆದು ಕೊಳ್ಳುವ ಆತಂಕ ಎದುರಿಸುತ್ತಿರುವ ಪ್ರದೇಶಗಳಲ್ಲಿ ಭೂಸ್ವಾಧೀನವನ್ನು ವಿರೋಧಿಸುತ್ತಿರುವ ಗ್ರಾಮದ ಹೋರಾಟಗಾರ ಜೊತೆ ಸುತ್ತಾಡುತ್ತಿದ್ದಾಗ ಅಕ್ರಮವಾಗಿ ಸರ್ವೆ ಮಾಡುತ್ತಿದ್ದ ತಂಡ ಎದುರಾಯಿತು. ಅವರ ಬಳಿ, ಸರ್ವೆಗೆ ಸಂಬಂಧಿಸಿದ ಸರ್ಕಾರ ಆದೇಶವಾಗಲೀ, ಗುರುತಿನ ಚೀಟಿಯಾಗಲೀ ಇರಲಿಲ್ಲ’ ಎಂದು ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದರು. ಈ ಸಂದರ್ಭ ಕೆ.ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ದಿನೇಶ್ ಹೆಗ್ಡೆ ಉಳೆಪಾಡಿ ಮತ್ತಿತರರು ಇದ್ದಾರೆ