ನ್ಯೂಯಾರ್ಕ್: ಪಾಕಿಸ್ತಾನದಲ್ಲಿ ಹಿಂದುಗಳು ಸೇರಿದಂತೆ ಎಲ್ಲ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಭಾರತ ವರದಿ ಮಾಡಿದೆ. ಪಾಕ್ ದೌರ್ಜನ್ಯವನ್ನು ಈ ಕೂಡಲೇ ನಿಲ್ಲಿಸಲು ಭಾರತ ಆಗ್ರಹಿಸಿದೆ.
”ಪಾಕಿಸ್ತಾನದಲ್ಲಿ ಸಾವಿರಾರು ಹಿಂದುಗಳು, ಸಿಖ್ಖರು ಮತ್ತು ಕ್ರೈಸ್ತ ಅಲ್ಪಸಂಖ್ಯಾತ ಮಹಿಳೆಯರು ಹಾಗೂ ಹುಡುಗಿಯರು ಅಪಹರಣಕ್ಕೆ ಒಳಗಾಗುತ್ತಿದ್ದಾರೆ. ಅವರನ್ನು ಮತಾಂತರ ಮಾಡಲಾಗುತ್ತಿದೆ ಮತ್ತು ಬಲವಂತದ ವಿವಾಹ ನಡೆಸಲಾಗುತ್ತಿದೆ” ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (ಯುಎನ್ಎಚ್ಆರ್ಸಿ) 45ನೇ ಅಧಿವೇಶನದಲ್ಲಿ ಮಾತನಾಡಿದ ಭಾರತೀಯ ಪ್ರತಿನಿಧಿ ಆರೋಪಿಸಿದರು.
ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವ ದೇಶ ಸಾವಿರಾರು ಭಯೋತ್ಪಾದಕರಿಗೆ ತಾನು ತರಬೇತಿ ನೀಡುತ್ತಿದೆಯೆಂದು ಸ್ವತಃ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದು ನಾಚಿಕೆಯ ಸಂಗತಿ ಎನ್ನುವ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡುತ್ತಿದ್ದಾರೆ. ಪಾಕಿಸ್ತಾನ ದಲ್ಲಿರುವ ಎಲ್ಲಾ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಅದು ಕೈಗೊಳ್ಳುತ್ತಿಲ್ಲ ಎಂದು ರಾಷ್ಟ್ರಮಟ್ಟದಲ್ಲಿ ಪಾಕ್ ಗೆ ಭಾರತ ಛೀಮಾರಿ ಹಾಕಿದೆ.