ಕಾರ್ಕಳ: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ದೇವರ ಪೂಜಾ ಕಾರ್ಯಕ್ರಮಗಳನ್ನು ಆನ್ಲೈನ್ ಮೂಲಕ ನಡೆಸುವ ಬಗ್ಗೆ ಸರ್ಕಾರ ವಿಷಯ ಪ್ರಸ್ತಾಪಿಸಿದ ಬೆನ್ನಲ್ಲೇ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪುರೋಹಿತರೊಬ್ಬರು ಆನ್ಲೈನ್ನಲ್ಲೇ ತಿಥಿ ಕಾರ್ಯ ಮಾಡಿ ಮುಗಿಸಿದ್ದಾರೆ
![](https://assets-news-bcdn.dailyhunt.in/cmd/resize/400x400_80/fetchdata16/images/f5/ef/98/f5ef98a57b816caa2c1a6a7078d626737e85402462a07bf28010669e702b8292.jpg)
ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಮಲ್ಲಿಗೆ ಓಣಿಯ ನಿವಾಸಿ ಪುರೋಹಿತ ಸುರೇಂದ್ರ ಭಟ್ ಎಂಬುವವರು ಅರಬ್ ದೇಶದ ಮಸ್ಕತ್ನಲ್ಲಿರುವ ಸಚಿತ್ ಕಾಮತ್ ಅವರ ತಂದೆಯ ವಾರ್ಷಿಕ ಶ್ರಾದ್ಧವನ್ನು ಆನ್ಲೈನ್ ಲೈವ್ ವಿಡಿಯೋ ಮೂಲಕ ನೆರವೇರಿಸಿದ್ದರು. ಈಗ ಕಾರ್ಕಳದ ಶಾಂತಾ ನಾಗೇಶ್ ಪೈ ಅವರು ನಿಧನರಾಗಿದ್ದು, ಮೃತರ ಮಗ ಮುಂಬೈಯಲ್ಲಿದ್ದು, ಊರಿಗೆ ಆಗಮಿಸಲಾಗದ ಹಿನ್ನೆಲೆಯಲ್ಲಿ ಇದೇ ಆನ್ಲೈನ್ ಲೈವ್ ವಿಡಿಯೋ ಮೂಲಕ ಮಗನಿಗೆ ತಾಯಿಯ ಶವಸಂಸ್ಕಾರದ ವಿಧಿಗಳನ್ನು ನೆರವೇರಿಸಲಾಗಿದೆ. ಹಾಗೇ, ಒಂಭತ್ತನೇ ದಿನದ ಕ್ರಿಯೆಯನ್ನೂ ಆನ್ಲೈನ್ನಲ್ಲಿ ಸುರೇಂದ್ರ ಭಟ್ ನೆರವೇರಿಸಿಕೊಟ್ಟಿದ್ದಾರೆ. ಈ ಎರಡು ಕುಟುಂಬದ ಶ್ರಾದ್ದ ಕಾರ್ಯ ಆನ್ ಲೈನ್ ನಲ್ಲೇ ನಡೆದಿರುವುದು ವಿಶೇಷ.
ಒಂದೆಡೆ ಲಾಕ್ಡೌನ್, ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಮತ್ತೊಂದೆಡೆ ಪುರೋಹಿತರು ಸಿಗುತ್ತಿಲ್ಲ. ಈ ನಡುವೆ ದೈವಾಧೀನರಾದವರಿಗೆ ಶ್ರಾದ್ಧ, ಪಿಂಡತರ್ಪಣ, ನೀಡುವುದಾರೆ ಹೇಗೆ? ಇಂತಹ ಧರ್ಮ ಸಂಕಟದಲ್ಲಿ ಸಿಲುಕಿದ ಕುಟುಂಬವೊಂದು ಪುರೋಹಿತರ ಜೊತೆ ನೇರ ಸಂಪರ್ಕದಲ್ಲಿ ಅವರ ಸಲಹೆಯಂತೆ ಆನ್ಲೈನ್ ವಿಡಿಯೋ ಮೂಲಕ ತಿಥಿ ಕಾರ್ಯವನ್ನು ನೆರವೇರಿಸಿ ತೃಪ್ತಿ ಪಡೆದಿದ್ದಾರೆ.