ಉಡುಪಿ: ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಕೂಗು ಉಡುಪಿಯಲ್ಲಿ ಬಲಗೊಳ್ಳುತ್ತಿದೆ. ಸಮಾಜಪರ ಚಿಂತಕರು, ವೈದ್ಯರು, ವಿದ್ಯಾರ್ಥಿಗಳು, ಗಟ್ಟಿ ಧ್ವನಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಭಿಯಾನ ಆರಂಭಿಸಿ ವರ್ಷಗಳೇ ಕಳೆದಿವೆ. ಇದೀಗ ಮುಂದುವರೆದು ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸರ್ಕಾರ ಕೂಡಲೇ ಮಂಜೂರು ಮಾಡುವಂತೆ ಆಗ್ರಹಿಸಿ ಉಡುಪಿ ಕರಾವಳಿ ಯೂತ್ ಕ್ಲಬ್ ಸದಸ್ಯರು ಹಾಗೂ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಅವರು ಏ.1ರಂದು ಮೌನಪಾದಯಾತ್ರೆ ಕೈಗೊಳ್ಳಲಿದ್ದಾರೆ.
ಬೆಳಗ್ಗೆ 8 ಗಂಟೆಗೆ ಮಲ್ಪೆಯ ಗಾಂಧಿ ಪ್ರತಿಮೆ ಬಳಿಯಿಂದ ಪಾದಯಾತ್ರೆ ಆರಂಭಗೊಳ್ಳಲಿದ್ದು, ಮಲ್ಪೆ ಪೊಲೀಸ್ ಠಾಣೆ, ಮಲ್ಪೆ ಬಸ್ ನಿಲ್ದಾಣ, ಆದಿ ಉಡುಪಿ, ಕರಾವಳಿ ಬೈಪಾಸ್, ಬನ್ನಂಜೆ, ಉಡುಪಿ ಸಿಟಿ ಬಸ್ ನಿಲ್ದಾಣ, ಕಲ್ಸಂಕ, ಕುಂಜಿಬೆಟ್ಟು, ಇಂದ್ರಾಳಿ, ಮಣಿಪಾಲ ಸಿಂಡಿಕೇಟ್ ಸರ್ಕಲ್ ಮೂಲಕ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರಿಗೆ ಮನವಿ ಸಲ್ಲಿಸಲಿದ್ದಾರೆ.