ಬಂಟ್ವಾಳ : ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ಅವರು ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರನ್ನು ಬಂಟ್ವಾಳದ ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರಿದ್ದಾರೆ.
ಈ ವೇಳೆ ಜನಾರ್ದನ ಪೂಜಾರಿ, ಕಾಂಗ್ರೆಸ್ ಕಾರ್ಯಕರ್ತರು ಒಂದೇ ಕುಟುಂಬದ ಸದಸ್ಯರು, ಅವರಿಗೆ ಕಿಂಚಿತ್ತೂ ನೋವಾಗದ ರೀತಿಯಲ್ಲಿ ಜೊತೆಯಲ್ಲಿ ಕರೆದುಕೊಂಡು ಹೋಗಿ ಅವರ ನೋವು-ನಲಿವುಗಳಿಗೆ ಸದಾ ಜೊತೆ ನಿಂತು ಪ್ರೋತ್ಸಾಹ ನೀಡಬೇಕು ಎಂದು ಕಿವಿ ಮಾತು ಹೇಳಿ, ಚುನಾವಣೆಯಲ್ಲಿ ಗೆಲುವು ನಿಮ್ಮದಾಗಲಿ ಎಂದು ಹಾರೈಸಿದ್ದಾರೆ ಎನ್ನಲಾಗಿದೆ.
ಬಳಿಕ ಮಾತನಾಡಿದ ಯು.ಟಿ. ಖಾದರ್ ಅವರು, ಕೇಂದ್ರದ ಮಾಜಿ ಸಚಿವರೂ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೂ, ಕರಾವಳಿ ಭಾಗದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ ಜನಾರ್ದನ ಪೂಜಾರಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯಲು ಮನೆಗೆ ಬಂದಿದ್ದೇನೆ. ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆಯಲು ಜನಾರ್ದನ ಪೂಜಾರಿ ಅವರೇ ಕಾರಣ ಎಂದರು.ಕಳೆದ ಐದು ವರ್ಷಗಳ ಶಾಸಕತ್ವ ಅವಧಿಯಲ್ಲಿ ಕ್ಷೇತ್ರದ ಜನರ ಗೌರವಕ್ಕೆ ಯಾವುದೇ ರೀತಿಯ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಮುಂದೆಯೂ ಜನ ಆಶೀರ್ವಾದ ಮಾಡುತ್ತಾರೆ ಎಂಬ ಭರವಸೆ ಇದ್ದು, ಸರ್ವ ಧರ್ಮದ ಜನರ ಪ್ರೀತಿ-ವಿಶ್ವಾಸ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಕ್ಷೇತ್ರದ ಮತ್ತು ಜಿಲ್ಲೆಯ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಖಾದರ್ ಎಂದರು.