ಸುಳ್ಯ; ಹೆರಿಗೆಯಾಗಿ ವಿಪರೀತ ರಕ್ತಸ್ರಾವದಿಂದಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯೊಬ್ಬರಿಗೆ ಕಷ್ಟಕಾಲದಲ್ಲಿ ಸಮಾಜ ಸೇವಕರೊಬ್ಬರು ನೆರವಾಗಿ ಮರು ಜನ್ಮ ನೀಡಿದ ಘಟನೆ ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮಕ್ಕೆ ಕೂಲಿ ಕೆಲಸಕ್ಕೆಂದು ಅಸ್ಸಾಂ ಮೂಲದ ಕುಟುಂಬವೊಂದು ಬಂದು ಸಣ್ಣ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆ ಟೆಂಟ್ ನಲ್ಲಿ ವಾಸವಿದ್ದ ಗರ್ಭಿಣಿಯೊಬ್ಬರಿಗೆ ಏಪ್ರಿಲ್ 10ರಂದು ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಯನ್ನು ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾರೆ.
ಟೆಂಟ್ ನೊಳಗೆ ಮಗುವಿಗೆ ಜನ್ಮ ನೀಡಿ ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ಆಕೆಯ ಸಹಾಯಕ್ಕೆ ಕೊನೆಗೆ ಸಮಾಜ ಸೇವಕ ಚಂದ್ರ ಕಡೋಡಿಯವರು ಬಂದಿದ್ದಾರೆ. ಅವರು ಅಮರ ಸುಳ್ಯ ಚಾರಿಟೇಬಲ್ ಟ್ರಸ್ಟ್ ಆಂಬ್ಯುಲೆನ್ಸ್ ನಲ್ಲಿ ಆಕೆಯನ್ನು ಹಾಗೂ ಮಗುವನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಡರಾತ್ರಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಸಿಕಿತ್ಸೆ ಕೊಡಿಸುವಲ್ಲಿ ಸಮಾಜ ಸೇವಕ ಸಫಲರಾಗಿದ್ದಾರೆ . ಸದ್ಯ ತಾಯಿ ಹಾಗೂ ಗಂಡು ಮಗು ಚಿಕಿತ್ಸೆಯ ನಂತರ ಚೇತರಿಸಿಕೊಂಡು ಆರೋಗ್ಯವಾಗಿದ್ದು ಚಂದ್ರ ಕಡೋಡಿ ಅವರ ಕೆಲಸಕ್ಕೆ ಎಲ್ಲರೂ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.