ಹಿರಿಯಡ್ಕ : ನಿನ್ನೆ ಇಲ್ಲಿಗೆ ಸಮೀಪದ ಆತ್ರಾಡಿ ಮದಗ ಸಮೀಪದ ಮನೆಯೊಂದರಲ್ಲಿ ತಾಯಿ ಮಗಳ ಮೃತದೇಹ ಸಿಕ್ಕಿರುವುದಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.ಇವರಿಬ್ಬರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಆರೋಪಿಗಳ ಪತ್ತೆಗೆ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಇಲ್ಲಿನ ಮದಗ ನಿವಾಸಿ ಚೆಲುವಿ (30) ಹಾಗೂ ಅವರ 10 ವರ್ಷ ವಯಸ್ಸಿನ ಮಗಳ ಶವವು ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ತಮಿಳುನಾಡು ಮೂಲದ ಚೆಲುವಿ ಕುಟುಂಬ ಹಲವು ವರ್ಷಗಳಿಂದ ಉಡುಪಿಯಲ್ಲಿ ವಾಸ ಮಾಡಿಕೊಂಡಿತ್ತು..
ಮೇ 8ರಂದು ರಾತ್ರಿ ವೇಳೆ ಇವರಿಬ್ಬರನ್ನು ದುಷ್ಕರ್ಮಿ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದೆಂದು ಮೃತರ ಸಹೋದರಿ ನೀಡಿರುವ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೆಲುವಿ ಮೊಬೈಲ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಕರೆ ಮಾಡಿ ತಿಳಿಸಿದ್ದರು. ಅದರಂತೆ ನೆರೆ ಮನೆಯವರು ಹೋಗಿ ನೋಡಿದಾಗ ಮನೆಯ ಬಾಗಿಲು ಅರ್ಧ ತೆರೆದಿತ್ತೆನ್ನಲಾಗಿದೆ. ಸರಿಯಾಗಿ ಪರಿಶೀಲಿಸಿದಾಗ ತಾಯಿ ಮಗಳು ಮನೆಯೊಳಗೆ ಮೃತಪಟ್ಟಿರುವುದು ಕಂಡು ಬಂದಿದೆ.
ಚೆಲುವಿ 15 ವರ್ಷಗಳ ಹಿಂದೆ ಸುಬ್ರಹ್ಮಣ್ಯ ಎಂಬುವರ ಜೊತೆ ಮದುವೆ ಆಗಿದ್ದು, ನಂತರ ಮಣಿಪಾಲದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಆಕೆಗೆ ಮತ್ತೋರ್ವ ಪರಿಚಯವಾಗಿದ್ದು, ಈ ವಿಚಾರ ತಿಳಿದು ಆಕೆಯ ಪತಿ ಆಕೆಯನ್ನು ಬಿಟ್ಟು ಹೋಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಇಬ್ಬರು ಎಸ್ಸೈಗಳ ತಂಡವನ್ನು ರಚಿಸಲಾಗಿದೆಂದು ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.