ಮಂಗಳೂರು: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ವಿಧಾನಸಭಾ ಚುನಾವಣೆಗೆ ತಯಾರಿಯ ಭಾಗವಾಗಿ ಕರಾವಳಿಯಲ್ಲಿ ರಾಜ್ಯ ಬಿಜೆಪಿ ನಾಯಕರ ಪ್ರವಾಸ ನಡೆಯಲಿದೆ.
ಏಪ್ರಿಲ್ 12 ಮತ್ತು 13 ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ಪಕ್ಷದ ಮಂಗಳೂರು ಸಂಘಟನಾ ವಿಭಾಗದಲ್ಲಿ ಪ್ರವಾಸ ನಡೆಯಲಿದೆ.
ಒಟ್ಟು ಮೂರು ತಂಡಗಳಲ್ಲಿ ಮೊದಲ ಹಂತದಲ್ಲಿ ರಾಜ್ಯವ್ಯಾಪಿ ಪ್ರವಾಸ ನಡೆಯುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ 9 ನಾಯಕರ ತಂಡ ಮಂಗಳೂರು ವಿಭಾಗದಲ್ಲಿ ಪ್ರವಾಸ ನಡೆಸುತ್ತಿದೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ತಂಡದಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ಡಾ. ಅಶ್ವಥ್ ನಾರಾಯಣ, ಬಿ. ಶ್ರೀರಾಮುಲು, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನಾ, ಲಕ್ಷ್ಮಣ ಸವದಿ, ಬಿ.ವೈ. ವಿಜಯೇಂದ್ರ ಮತ್ತು ನಯನಾ ಗಣೇಶ್ ಒಳಗೊಂಡಿದ್ದಾರೆ.
ಎರಡು ದಿನಗಳ ಪ್ರವಾಸದ ವೇಳೆ ಬಿಜೆಪಿ ಶಕ್ತಿ ಕೇಂದ್ರ ಸಭೆಗಳು, ಬೂತ್ ಸಮಿತಿ ಸಭೆಗಳು, ಜಿಲ್ಲಾ ಕೋರ್ ಕಮಿಟಿ ಸಭೆಗಳು, ಪ್ರಮುಖರ ಸಭೆಗಳು ನಡೆಯಲಿವೆ. ಏಪ್ರಿಲ್ 13 ರಂದು ಮಂಗಳೂರಿನಲ್ಲಿ ಬೃಹತ್ ಸಮಾವೇಶ ಕೂಡಾ ಆಯೋಜಿಸಲಾಗಿದೆ.