ಸುಳ್ಯ : ಇಲ್ಲಿನ ದೇವಚಳ್ಳ ಗ್ರಾಮದ ತಳೂರುವಿನಲ್ಲಿ ಮಗಳೊಂದಿಗೆ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮೃತಳ ಅತ್ತೆ, ಮೈದುನ ಹಾಗೂ ಮೈದುನನ ಪತ್ನಿಯ ಮೃತ ಮಹಿಳೆ ಗೀತಾ ತಾಯಿ ದೂರು ದಾಖಲಿಸಿದ್ದಾರೆ.
ಘಟನೆಯಲ್ಲಿ ತಾಯಿ ಮೃತಪಟ್ಟರೆ, ಮಗಳು ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾಳೆ. ಅಗ್ನಿಶಾಮಕ ದಳದ ಸಿಬ್ಬಂದಿ ದಯಾನಂದ ಅವರ ಪತ್ನಿ ಸುಳ್ಯದ ನೆಹರೂ ಮೆಮೊರಿಯಲ್ ಕಾಲೇಜಿನಲ್ಲಿ ಕ್ಲರ್ಕ್ ಆಗಿರುವ ಗೀತಾ (26) ಮೃತಪಟ್ಟವರು. ಮಗಳು ಪೂರ್ವಿಕಾ ಪವಾಡ ಸದೃಶ ಎಂಬಂತೆ ಬದುಕಿದ್ದಾಳೆ. ಘಟನೆಯ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಗೀತಾ ಅವರ ತಾಯಿ ಪುಷ್ಪಾವತಿಯವರು ನೀಡಿದ ದೂರಿನಂತೆ ಗೀತಾಳ ಪತಿಯ ತಾಯಿ ಸೀತಮ್ಮ, ಮೈದುನ ಜಯಪ್ರಕಾಶ ಹಾಗೂ ಮೈದುನನ ಪತ್ನಿ ನಿಶ್ಮಿತಾ ಕಳೆದ ಎರಡು ವರ್ಷದಿಂದ ಆಕೆಗೆ ಕಿರುಕುಳ ನೀಡುತ್ತಿದ್ದರು. ಸಣ್ಣಪುಟ್ಟ ವಿಷಯಕ್ಕೆ ಜಗಳವಾಡುತ್ತಿದ್ದರು. ಒಂದೇ ಮನೆಯಲ್ಲಿದ್ದರೂ ಈ ಮೂರು ಜನ ಮಗಳ ಜತೆ ಮಾತುಕತೆ ನಿಲ್ಲಿಸಿದ್ದಾರೆ. ಅವರು ಮೂವರು ಪ್ರತ್ಯೇಕವಾಗಿದ್ದು, ಇವಳನ್ನು ಪ್ರತ್ಯೇಕಿಸಿದ್ದರು. ಈ ಬಗ್ಗೆ ಅವಳು ನನ್ನಲ್ಲಿ ದೂರವಾಣಿಯಲ್ಲಿ ದೂರಿದ್ದಳು ಎಂದವರು ದೂರಿನಲ್ಲಿ ಆರೋಪಿಸಿದ್ದಾರೆ.