ಬಂಟ್ವಾಳ: ಉಕ್ಕಿ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ಈಜಲು ಹೋದ ಐವರು ಯುವಕರಲ್ಲಿ ಓರ್ವ ನೀರು ಪಾಲಾಗಿರುವ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಪಡು ಗ್ರಾಮದ ತಲೆಮೊಗರು ಎಂಬಲ್ಲಿ ನಡೆದಿದೆ. ಉಳಿದ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ತಲೆಮೊಗರು ನಿವಾಸಿ ರುಕ್ಮಯ್ಯ ಅವರ ಮಗ ಅಶ್ವಿಥ್ (19) ನೀರು ಪಾಲಾದ ಯುವಕ.ರಕ್ಷಣೆ ಮಾಡಿದವರಲ್ಲಿ ಹರ್ಷಿತ್ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದಂತೆ ಸ್ನೇಹಿತರಾದ ಲಿಖಿತ್, ವಿಕೇಶ್ , ವಿಶಾಲ್ ಚೇತರಿಸಿಕೊಂಡಿದ್ದಾರೆ.
ಸ್ನೇಹಿತರಾದ ಐವರು ಸಂಜೆ 4 ಗಂಟೆ ವೇಳೆಗೆ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದಾರೆ ಎಂದು ಹೇಳಲಾಗಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಮಿತಿಮೀರಿ ಹರಿಯುತ್ತಿದ್ದು ಅಪಾಯಕಾರಿ ಎಂದು ಗೊತ್ತಿದ್ದು, ಮಕ್ಕಳು ಈ ರೀತಿ ನದಿಗೆ ಇಳಿಯುವುದರ ಬಗ್ಗೆ ಮನೆಯವರು ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಭೇಟಿ ನೀಡಿ ನೀರು ಪಾಲಾದ ಅಶ್ವಿಥ್ ನ ಪತ್ತೆಗಾಗಿ ಸ್ಥಳೀಯ ಮುಳುಗು ತಜ್ಞರ ಸಹಾಯ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ಮೂಲಕ ಹುಡುಕಾಟ ನಡೆಸಿದ್ದಾರೆ. ಆದರೆ ರಾತ್ರಿಯಾದರೂ ಹರ್ಷಿತ್ ಪತ್ತೆಯಾಗಿಲ್ಲ.