ಕೇರಳ: ತಿರುವನಂತಪುರಂನಲ್ಲಿ 23 ವರ್ಷದ ಯುವತಿಯೊಬ್ಬಳು ಸ್ವಾಮಿ ಗಂಗೇಶ್ವರಾನಂದ ಅವರ ಮರ್ಮಾಂಗ ಕತ್ತರಿಸಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
2017ರಲ್ಲಿ ಕೇರಳದ ತಿರುವನಂತಪುರಂನ 23 ವರ್ಷದ ಯುವತಿಯೊಬ್ಬಳು ಸ್ವಾಮೀಜಿ ಗಂಗೇಶ್ವರಾನಂದ ಅವರು ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಅಲ್ಲದೆ, ಅವರು ಅತ್ಯಾಚಾರಕ್ಕೆ ಮುಂದಾದಾಗ ನಾನು ಆತ್ಮ ರಕ್ಷಣೆಗಾಗಿ ಅವರ ಮರ್ಮಾಂಗ ಕತ್ತರಿಸಿದೆ ಎಂದು ಹೇಳಿದ್ದಳು. ಈ ಪ್ರಕರಣದಲ್ಲಿ ಸ್ವಾಮೀಜಿಯನ್ನು ಬಂಧಿಸಿದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
ಈ ನಡುವೆ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ ಸ್ವಾಮೀಜಿ, ಪ್ರಕರಣ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ನಲ್ಲಿ ಯುವತಿ ಸ್ವಾಮೀಜಿ ಪರವಾಗಿ ಹೇಳಿಕೆ ನೀಡಿದ್ದಳು. ಸ್ವಾಮೀಜಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಅವರ ಶಿಷ್ಯ ಅಯ್ಯಪ್ಪದಾಸ್ ಎಂಬುವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಳು. ಬಳಿಕ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಇದೀಗ ಯುವತಿ ಸ್ವಾಮೀಜಿ ಮೇಲೆ ಮಾಡಿರುವ ಆರೋಪ ಸುಳ್ಳು ಎಂಬ ಸತ್ಯವನ್ನು ಕ್ರೈಮ್ ಬ್ರಾಂಚ್ ಬಯಲಿಗೆಳೆದಿದೆ.
ಸ್ವಾಮೀಜಿಯ ಶಿಷ್ಯ ಅಯ್ಯಪ್ಪದಾಸ್ ಮತ್ತು ಯುವತಿ ಪ್ರೀತಿಸುತ್ತಿದ್ದರು. ಅವರಿಬ್ಬರ ಪ್ರೀತಿಗೆ ಅಡ್ಡಿಯಾಗಿದ್ದ ಸ್ವಾಮೀಜಿಯನ್ನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗಟ್ಟುವ ಹುನ್ನಾರ ಮಾಡಿದ್ದರು. ಅದಕ್ಕಾಗಿ ಸ್ವಾಮೀಜಿ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಹಾಗೂ ಆತ್ಮ ರಕ್ಷಣೆಗೆ ಅವರ ಮರ್ಮಾಂಗ ಕತ್ತರಿಸಿರುವುದಾಗಿ ಯುವತಿ ಸುಳ್ಳು ಆರೋಪ ಮಾಡಿದ್ದಳು ಎಂಬುವುದು ಗೊತ್ತಾಗಿದೆ. ಹಾಗಾಗಿ, ಸುಳ್ಳು ಆರೋಪ ಮಾಡಿರುವ ಯುವತಿ ಮತ್ತು ಆಕೆಯ ಪ್ರಿಯಕರನ ಮೇಲೆ ಪ್ರಕರಣ ದಾಖಲಿಸಲು ಕ್ರೈಮ್ ಬ್ರಾಂಚ್ ನಿರ್ಧರಿಸಿದೆ.