ಕಡಬ : ಭತ್ತ ಹೇಗೆ ಬೆಳೆಯೋದು ಅಂತಾ ಪ್ರಶ್ನೆ ಕೇಳಿದ್ರೆ ಅದೆಷ್ಟೋ ಮಕ್ಕಳಿಗೆ ಸರಿಯಾದ ಉತ್ತರವೇ ಗೊತ್ತಿರೋದಿಲ್ಲ. ಅಂತಹದರಲ್ಲಿ ಕಡಬದಲ್ಲಿ ಅವಳಿ ಸಹೋದರರಿಬ್ಬರು ತಮ್ಮ ಮನೆಯ ಅಂಗಳದಲ್ಲೇ ಭತ್ತ ಬೆಳೆದು ಶಹಬ್ಬಾಸ್ ಅನ್ನಿಸಿಕೊಂಡಿದ್ದಾರೆ. ಭುವನ್ ಮತ್ತು ಭವನ್ ಅವರೇ ಈ ಸಾಧನೆ ಮಾಡಿದ ಅವಳಿ ಸಹೋದರರು.
ಇಂದಿನ ಹೊಸ ತಲೆಮಾರಿನ ಮಕ್ಕಳಿಗೆ ಭತ್ತದ ಕೃಷಿಯ ಬಗ್ಗೆ ಅರಿವೇ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ.ಇಂಥಹುದೇ ಪ್ರಶ್ನೆಯನ್ನು ಅವಳಿಗಳಾದ ಭುವನ್ ಮತ್ತು ಭವನ್ ಮುಂದೆ ಪುಟ್ಟ ಸಹೋದರಿಯೂ ಮಾಡಿದ್ದಳು. ತಿನ್ನುವ ಅಕ್ಕಿ ಎಲ್ಲಿ ಸಿಗುತ್ತೆ, ಹೇಗೆ ಸಿಗುತ್ತೆ ಎನ್ನುವ ಪ್ರಶ್ನೆಗೆ ತಂಗಿಯ ಪ್ರಶ್ನೆ ವಿದ್ಯಾರ್ಥಿಗಳಾಗಿರುವ ಭವನ್ ಹಾಗೂ ಭುವನ್ ಗೆ ಭತ್ತದ ಕೃಷಿಯ ಮಹತ್ವವನ್ನು ತಿಳಿಸಿತ್ತು. ಈ ಕಾರಣಕ್ಕಾಗಿ ಮನೆಯ ಅಂಗಳದಲ್ಲೇ ಭತ್ತವನ್ನು ಬಿತ್ತಿ ಭತ್ತದ ಕೃಷಿಗೆ ಮುಂದಾದ ಈ ವಿದ್ಯಾರ್ಥಿಗಳು ಭತ್ತದ ಕೃಷಿಯನ್ನು ಮಹತ್ವವನ್ನು ತಿಳಿಸಲು ಮುಂದಾಗಿದ್ದಾರೆ.
ಅಂಗಳವನ್ನು ಮಣ್ಣು ಹಾಕಿ ಹದ ಮಾಡಿ, ಮಣ್ಣು ಸವೆದು ಹೋಗದಂತೆ ಸುತ್ತ ಕಟ್ಟೆ ಕಟ್ಟಿ ನೀರಿನ ಒರತೆಯಿರುವಂತೆ ನೋಡಿಕೊಂಡಿದ್ದಾರೆ. ಭತ್ತದ ಗಿಡಗಳ ಮಧ್ಯೆ ಹುಲ್ಲು ಬೆಳೆಯದಿರಲಿ ಎನ್ನುವ ಕಾರಣಕ್ಕೆ ತೆಂಗಿನ ಸೋಗೆ ಹಾಗೂ ಅಡಿಕೆ ಸಿಪ್ಪೆಗಳನ್ನು ಹರಡಿದ್ದು, ಇದೀಗ ಉತ್ತಮ ಫಸಲು ಬೆಳೆದು ನಿಂತಿದೆ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ತೃತೀಯ ವರ್ಷದ ಬಿಎಸ್ಸಿ ವಿದ್ಯಾಭ್ಯಾಸವನ್ನು ಮಾಡಿಕೊಂಡಿರುವ ಈ ಅವಳಿ ಸಹೋದರರು ಕೊರೋನಾ ಕಾರಣದಿಂದ ಮನೆಯಲ್ಲೇ ಉಳಿದುಕೊಂಡಿದ್ದರು.