ಕುಂದಾಪುರ: ಇದೀಗ ಮಂಗಳೂರಿನ ಪಣಂಬೂರು ಬಳಿಕ ಎರಡನೇ ಸ್ಕೈ ಡೈನಿಂಗ್ ತಾಣವೆಂದು ಕುಂದಾಪುರದ ತ್ರಾಸಿ – ಮರವಂತೆ ಬೀಚ್ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಇಲ್ಲಿ ಶುಕ್ರವಾರದಿಂದ ವಿನೂತನವಾದ ಸ್ಕೈ ಡೈನಿಂಗ್ (ಗಗನದಲ್ಲಿ ಊಟ) ಆರಂಭಗೊಂಡಿದೆ.
ಸ್ಕೈ ಡೈನಿಂಗ್ ಅನ್ನು ಉದ್ಘಾಟಿಸಿದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ‘ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗೆ ಇದೊಂದು ಅನುಕೂಲಕರವಾದ ತಂತ್ರವಾಗಿದ್ದು, ಇಲ್ಲಿನ ಪ್ರವಾಸೋದ್ಯಮ ಇದರಿಂದ ಇನ್ನಷ್ಟು ಕಳೆಗಟ್ಟಲಿದೆ,’ ಎಂದರು.
ತ್ರಾಸಿ – ಮರವಂತೆ ನಲ್ಲಿ ಆರಂಭಗೊಂಡಿರುವ ಈ ಸ್ಕೈ ಡೈನಿಂಗ್ ನಲ್ಲಿ ಕೂತು 90 – 100 ಮೀಟರ್ ಎತ್ತರದಲ್ಲಿ ಸೌಪರ್ಣಿಕಾ ನದಿ ಹಾಗೂ ಅರಬ್ಬೀ ಸಮುದ್ರವನ್ನು ವೀಕ್ಷಿಸುತ್ತಾ ಊಟ ಮಾಡಬಹುದು.
ಉದ್ಘಾಟನಾ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಪಿ, ತ್ರಾಸಿ ಗ್ರಾ.ಪಂ. ಅಧ್ಯಕ್ಷ ಮಿಥುನ್ ದೇವಾಡಿಗ, ಟೀಮ್ ಮಂತ್ರಾಸ್ ಸ್ಕೈಡೈನಿಂಗ್ ಮಾಲಕ ಪ್ರವೇಶ್ ಮಂಜೇಶ್ವರ, ಪ್ರಮುಖರಾದ ರಾಕೇಶ್ ಅಥಾವರ್, ನಾರಾಯಣ ಕುಲಾಲ್, ರವಿರಾಜ್, ಗ್ರಾ.ಪಂ. ಸದಸ್ಯ ನಾಗರಾಜ ಪಟಗಾರ್ ಮತ್ತಿತರು ಉಪಸ್ಥಿತರಿದ್ದರು.