ಕೊಟ್ಟಿಗೆಹಾರ : ಮೂಡಿಗೆರೆಯ ಸುಶಾಂತ್ ನಗರದಿಂದ ಬಲ್ಲಾಳರಾಯನದುರ್ಗಕ್ಕೆ ಹೋದ ನಾಲ್ವರು ಪ್ರವಾಸಿಗರು ಕಾಡಿನಲ್ಲಿ ದಾರಿ ತಪ್ಪಿದ್ದು, ಅವರಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ನಿನ್ನೆ ಮಧ್ಯಾಹ್ನ ದುರ್ಗದಹಳ್ಳಿ ಸಮೀಪದ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಬಲ್ಲಾಳರಾಯನದುರ್ಗ, ರಾಣಿಝರಿಗೆ ಚಾರಣಕ್ಕೆ ಬಂದಿದ್ದ ಮೂಡಿಗೆರೆ ಮೂಲದ ಪ್ರಜ್ವಲ್, ಸ್ವರೂಪ್, ಪ್ರಜ್ವಲ್, ವಿವೇಕ್ ಎಂಬುವವರು ಬಲ್ಲಾಳರಾಯನ ದುರ್ಗದ ಅರಣ್ಯದಲ್ಲಿ ಸಾಗಿದ್ದು, ನಿನ್ನೆ ಸಂಜೆಯ ವೇಳೆಗೆ ಹಿಂದಿರುಗಿ ಬರಲು ದಾರಿ ತಿಳಿಯದೆ ಅರಣ್ಯದಲ್ಲೇ ಸಿಲುಕಿದ್ದಾರೆ.
ದಾರಿತಪ್ಪಿದ ಪ್ರವಾಸಿಗರು ಅರಣ್ಯದಲ್ಲಿ ನೆಟ್ವರ್ಕ್ ಸಿಗುವ ಕೆಲ ಕಡೆಗಳಲ್ಲಿ ನಿಂತು ಸ್ಥಳೀಯರಿಗೆ ಕರೆ ಮಾಡಿದ್ದಾರೆ. ಸ್ಥಳೀಯರು ರಾತ್ರಿ ತೆರಳಿ ಹುಡುಕಾಟದಲ್ಲಿ ತೊಡಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯೂ ಸಾಥ್ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅರಣ್ಯಾಧಿಕಾರಿ ಯಾಸಿನ್, ‘ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಚಾರಣಕ್ಕೆ ಬಂದಿದ್ದಾರೆ. ಸಂಜೆ 4 ಗಂಟೆಯೊಳಗೆ ಚಾರಣ ಮುಗಿಸಬೇಕು. ಆದರೆ, ಕತ್ತಲಾದ ನಂತರವೂ ಬಾರದಿರುವುದರಿಂದ ಪ್ರವಾಸಿಗರಿಗೆ ದಾರಿ ತಪ್ಪಿದೆ’ ಎಂದು ತಿಳಿಸಿದ್ದಾರೆ.