ಉಡುಪಿ: ಸಮುದ್ರಕ್ಕಿಳಿಯುವಾಗ ಎಚ್ಚರ ಅಂತಾ ಎಷ್ಟೇ ಮನವಿ ಮಾಡಿದ್ರೂ ಪ್ರವಾಸಿಗರು ಮಾತ್ರ ನಿರ್ಲಕ್ಷ್ಯ ಮಾಡುತ್ತಲೇ ಇರುತ್ತಾರೆ. ಇದೇ ರೀತಿ ಮಲ್ಪೆ ಕಡಲತೀರದಲ್ಲಿ ಸಮುದ್ರಕ್ಕೆ ಇಳಿದ ಬೆಂಗಳೂರು ಮೂಲದ ಮೂವರು ನೀರಿನಲ್ಲಿ ಮುಳುಗಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ ಬೆಂಗಳೂರಿನ 10 ಜನ ಪ್ರವಾಸಿಗರು ಮಲ್ಪೆಯ ಕಡಲತೀರಕ್ಕೆ ಆಗಮಿಸಿದ್ದರು. ಈ ಪೈಕಿ ಐದಾರು ಜನ ನೀರಿಗಿಳಿದು ಮೋಜು ಮಸ್ತಿಯಲ್ಲಿ ತೊಡಗಿದ್ದರು. ಮೊದಲು ಯುವತಿಯೊಬ್ಬರು ನೀರಿನಲ್ಲಿ ಮುಳುಗಿದ್ದರು. ಆಕೆಯ ರಕ್ಷಣೆಗೆ ಇನ್ನಿಬ್ಬರು ನೀರಿಗೆ ಹಾರಿದ್ದಾರೆ. ಈ ವೇಳೆ ಮೂವರು ಕೂಡ ಅಪಾಯಕ್ಕೆ ಸಿಲುಕಿದ್ದರು. ದಡದಲ್ಲಿ ಇದ್ದವರು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ ಸಮುದ್ರ ತೀರದಿಂದ ಸುಮಾರು 20 ಮೀಟರ್ ದೂರದಲ್ಲಿ ಮುಳುಗುತ್ತಿದ್ದ ಅವರನ್ನು ರಕ್ಷಿಸಲು ಜೆಟ್ ಸ್ಕೀ ಮತ್ತು ಪ್ರವಾಸಿ ದೋಣಿಯ ಚಾಲಕರು ಬಂದಿದ್ದಾರೆ.
ಜೆಟ್ಸ್ಕಿ ಬೋಟ್ ನ ಮೂಲಕ ಮೊದಲು ರಕ್ಷಣೆ ಮಾಡಿ ಪ್ರವಾಸಿಗರು ಸೈಂಟ್ ಮೇರಿಸ್ ತೆರಳುವ ದೋಣಿಗೆ ಹಾಕಿದ್ದಾರೆ. ಈ ಮೂಲಕ ಅಪಾಯದಲ್ಲಿದ್ದ ಮೂವರನ್ನೂ ರಕ್ಷಣೆ ಮಾಡಲಾಯ್ತು. ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.