ಕಾರವಾರ: ಆ ಅಜ್ಜಿಗೆ ನಟ ಪುನೀತ್ ರಾಜ್ ಕುಮಾರ್ ಅವ್ರು ಅಂದ್ರೆ ಪಂಚಪ್ರಾಣ. ಕಳೆದ 12 ವರ್ಷಗಳಿಂದ ಅಪ್ಪುವನ್ನು ಭೇಟಿಯಾಗ್ಬೇಕು ಅಂತಾ ಆ ಅಜ್ಜಿ ಕಾಯುತ್ತಲೇ ಇದ್ರು. ಕೊನೆಗೆ ಇವತ್ತು ಕಾಲ ಕೂಡಿ ಬಂದಿತ್ತು.
ಹೌದು.. ಕಾರವಾರದ ಜೋಯಿಡಾದ 75 ವರ್ಷದ ವೃದ್ಧೆ ಕರಿಯವ್ವ ಬಾಳೆಗೌಡ ನಾಯ್ಕ ಹಾಗೂ ಆಕೆಯ ಪತಿ ಬಾಳೆಗೌಡ ನಾಯ್ಕ ಕಟ್ಟಾ ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳಾಗಿದ್ದಾರೆ. ಪತಿ ಬಾಳೆಗೌಡ ನಾಯ್ಕ ಗೋಕಾಕ್ ಚಳುವಳಿಯಲ್ಲಿ ರಾಜ್ ಕುಮಾರ್ ಅವರ ಜೊತೆಗೆ ಹೋರಾಟ ಮಾಡಿದ್ದರು. ಬಾಳೆಗೌಡರು ಮನೆಯಲ್ಲಿ ಕವಿರತ್ನ ಕಾಳಿದಾಸ ಸಿನಿಮಾ ನೋಡುವಾಗ ಹೃದಯಾಘಾತವಾಗಿ ಮೃತಪಟ್ಟಿದ್ದರು.
ಹೀಗಾಗಿ ಈ ವಿಷಯವನ್ನು ರಾಜ್ ಕುಟುಂಬದವರಿಗೆ ತಿಳಿಸಬೇಕು ತಮ್ಮ ಅಭಿಮಾನ ವ್ಯಕ್ತಪಡಿಸಬೇಕು ಎಂಬ ಹಂಬಲ ಕರಿಯವ್ವ ಅವರಿಗೆ ಇತ್ತು. ಆದರೆ ಆ ಕಾಲ ಕೂಡಿ ಬಂದಿರಲಿಲ್ಲ. 12 ವರ್ಷದ ನಂತರ ಇಂದು ಜೋಯಿಡಾದಲ್ಲಿ ಸಿನಿಮಾ ಶೂಟಿಂಗ್ ನಿಮಿತ್ತ ಆಗಮಿಸಿದ್ದ ಪುನೀತ್ ರಾಜ್ಕುಮಾರ್ ಅವರನ್ನು ನೋಡುವ ತವಕದಲ್ಲಿ ಕರಿಯವ್ವ ಶೂಟಿಂಗ್ ಸೆಟ್ಗೆ ಕೂಡ ಹೋಗಿದ್ದರು. ಆದರೆ ಪೊಲೀಸರು ಭೇಟಿಗೆ ಅವಕಾಶ ನೀಡರಲಿಲ್ಲ.
ಇದರಿಂದ ಬೇಸತ್ತ ಕರಿಯವ್ವ ಪುನೀತ್ ಅವರನ್ನು ನೋಡಲು ಅವಕಾಶ ನೀಡದೇ ಇದ್ದರೆ, ನಾನು ಸಾಯುತ್ತೇನೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಈ ವಿಚಾರ ಪುನೀತ್ ರಾಜ್ಕುಮಾರ್ ಅವರ ಕಿವಿಗೆ ಬಿದ್ದಿದೆ. ಆಗ ತಕ್ಷಣ ಕರಿಯವ್ವ ಮತ್ತು ಅವರನ್ನು ಕುಟುಂಬವನ್ನು ಪುನೀತ್ ಅವರು ತಮ್ಮ ಬಳಿ ಕರೆಸಿಕೊಂಡು ಮಾತನಾಡಿದ್ದಾರೆ. ಜೊತೆಗೆ ಕರಿಯವ್ವ ಅವರ ಅಭಿಮಾನ ಕಂಡು ಭಾವುಕರಾಗಿದ್ದಾರೆ.