ಬಂಟ್ವಾಳ: ನಿನ್ನೆ ಪಾಣೆಮಂಗಳೂರು ಸೇತುವೆಯ ಬಳಿ ಬ್ಯಾಗನ್ನಿಟ್ಟು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದ. ಹುಡುಕಾಟದ ನಂತರ ಇಂದು ಸಂಜೆ ಪಾಣೆಮಂಗಳೂರು ಹೊಸ ಸೇತುವೆಯ ತಳಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.
ಇನ್ನು ನದಿಗೆ ಹಾರಿದ ಯುವಕ ಪುತ್ತೂರು ತಾಲೂಕಿನ ಬಲ್ನಾಡು ಕಾಂತಿಲ ನಿವಾಸಿ ಸುಚೇತನ್ (27) ಎಂದು ಹೇಳಲಾಗಿದೆ. ಈತ ನಿನ್ನೆ ಮಂಗಳೂರಿನ ಪಿಜಿಯಿಂದ ಬಂದು ಬೆಳಗ್ಗೆ ಪಾಣೆಮಂಗಳೂರು ಹೊಸ ಸೇತುವೆಯ ಬಳಿ ತನ್ನ ಬ್ಯಾಗ್ ಇರಿಸಿ ನದಿಗೆ ಹಾರಿದ್ದನ್ನು ಕಾರಿನಲ್ಲಿ ತೆರಳುತ್ತಿದ್ದವರು ನೋಡಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆತನ ಬ್ಯಾಗಿನಲ್ಲಿ ಸಿಕ್ಕ ಆಧಾರ್ ಕಾರ್ಡ್, ವೋಟರ್ ಐಡಿಯ ಆಧಾರದಲ್ಲಿ ಇದೇ ಯುವಕ ನದಿಗೆ ಹಾರಿದ್ದಾನೆ ಎಂದು ಸಂಶಯಿಸಿ ಮನೆಗೆ ಮಾಹಿತಿ ನೀಡಲಾಗಿತ್ತು. ಮನೆಯವರು ಕೂಡ ಆಗಮಿಸಿದ್ದರು.
ನಿನ್ನೆ ರಾತ್ರಿವರೆಗೂ ಬಂಟ್ವಾಳ ಅಗ್ನಿಶಾಮಕ ದಳದವರು, ಸ್ಥಳೀಯ ಈಜುಗಾರರು ಬೋಟಿನ ಮೂಲಕ ಸಂಜೆಯವರೆಗೂ ಹುಡುಕಾಡಿದರೂ, ಯುವಕನ ಪತ್ತೆಯಾಗಿರಲಿಲ್ಲ. ಇಂದು ಕೂಡಾ ಹುಡುಕಾಟ ಮುಂದುವರಿಸಿದ್ದು, ಯುವಕನ ಮೃತದೇಹವು ಪಾಣೆಮಂಗಳೂರು ಹೊಸ ಸೇತುವೆಯ ತಳಭಾಗದಲ್ಲಿ ಪತ್ತೆಯಾಗಿದೆ.
ಬಂಟ್ವಾಳ ಅಗ್ನಿ ಶಾಮಕ ದಳದವರು ಬೋಟಿನಲ್ಲಿ ಹುಡುಕಾಡುವಾಗ ಶವ ಪತ್ತೆಯಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.