ಟಿ. ನರಸೀಪುರ (ಮೈಸೂರು): ಇತ್ತೀಚಿನ ದಿನಗಳಲ್ಲಿ ಮದುವೆಗೆ ಮುಂಚೆ ಜೋಡಿಗಳ ಫ್ರಿವೆಡ್ಡಿಂಗ್ ಶೂಟ್ ಕಡ್ಡಾಯ ಎಂಬ ಅಲಿಖಿತ ನಿಯಮ ಜಾರಿಗೆ ಬಂದಿದೆ. ವಿಭಿನ್ನವಾಗಿ ಎಲ್ಲರ ಗಮನಸೆಳೆಯುವಂತೆ ಮದುವೆಗೆ ಮುಂಚೆ ಫೋಟೋಗೆ ಫೋಸ್ ನೀಡದಿದ್ದರೆ, ಮದುವೆಯೇ ಸಂಪೂರ್ಣಗೊಂಡಿಲ್ಲ ಎಂಬ ಭಾವನೆ ಈಗಿನ ಯುವ ಜೋಡಿಗಳದ್ದು. ಆದರೆ ಈ ಫೋಟೋಶೂಟೊಂದು ಇನ್ನಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಡಲು ಕನಸು ಕಾಣುತ್ತಿದ್ದ ನವ ಜೋಡಿಗಳಿಗೆ ಯಮನ ರೂಪದಲ್ಲಿ ಕಾಡಿದೆ.
ಕಾವೇರಿ ನದಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಮಾಡಿಸುತ್ತಿದ್ದ ಜೋಡಿಯೊಂದು ತೆಪ್ಪ ಮುಳುಗಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ತಲಕಾಡು ಬಳಿ ನಡೆದಿದೆ. ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು (28), ಶಶಿಕಲಾ (20) ಮೃತ ದುರ್ದೈವಿಗಳು.
ಮೃತ ಈ ಜೋಡಿಯ ಮದುವೆ ಇದೆ ತಿಂಗಳು ನ.22ರಂದು ನಿಗದಿಯಾಗಿತ್ತು. ಹಾಗಾಗಿ ಮದುವೆಯ ಮೊದಲು ತಿ.ನರಸೀಪುರ ತಾಲೂಕಿನ ಮುಡುಕುತೊರೆ ಬಳಿ ಕಾವೇರಿ ನದಿ ಮಧ್ಯೆ ಪ್ರಿ ವೆಡ್ಡಿಂಗ್ ಫೋಟೊಶೂಟ್ ಗೆ ಯೋಜನೆ ಮಾಡಿದ್ದರು. ಮದುವೆ ಹುಡುಗ, ಹುಡುಗಿಗೆ ಒಂದು ತೆಪ್ಪ ಹಾಗೂ ಫೋಟೋಗ್ರಾಫರ್, ಸಂಬಂಧಿಕರು ಮತ್ತೊಂದು ತೆಪ್ಪದಲ್ಲಿ ಕಾವೇರಿ ನದಿಯಲ್ಲಿ ಫೋಟೊಶೂಟ್ ಮಾಡುತ್ತಿದ್ದರು.
ಹರಿಯುವ ನೀರಲ್ಲಿ ತೆಪ್ಪದ ಮೇಲೆ ನಿಂತು ಕ್ಯಾಮಾರಗೆ ಪೋಸ್ ಕೊಡುವ ವೇಳೆಗೆ ತೆಪ್ಪ ಮಗುಚಿದ್ದು ಚಂದ್ರು, ಶಶಿಕಲಾ ನೀರಿನಲ್ಲಿ ಮುಳುಗಿದ್ದಾರೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತಾದರೂ ಇಬ್ಬರೂ ಮೃತಪಟ್ಟಿದ್ದಾರೆ. ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.