ಬೆಂಗಳೂರು: ಟ್ರೋಫಿ ಗೆಲ್ಲುವ ಕನಸು ಕಟ್ಟಿಕೊಂಡು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದ ಧನುಶ್ರೀ ಅವರಿಗೆ ತೀವ್ರ ನಿರಾಸೆ ಆಗಿದೆ. ಬಿಗ್ಬಾಸ್ ಸೀಸನ್ನ ಮೊದಲ ಎಲಿಮಿನೇಶನ್ನಲ್ಲಿ ಟಿಕ್ಟಾಕ್ ಸ್ಟಾರ್ ಧನುಶ್ರಿ ಮನೆಯಿಂದ ಹೊರಗೆ ಹೋಗಿದ್ದಾರೆ.
ಮೊದಲ ವಾರ ಐದು ಮಂದಿ ನಾಮಿನೇಟ್ ಆಗಿದ್ದರು. ಧನುಶ್ರೀ, ನಿರ್ಮಲಾ, ರಘು ಗೌಡ, ವಿಶ್ವ ಹಾಗೂ ಶುಭಾ ಪೂಂಜಾ. ಇದರಲ್ಲಿ ಶನಿವಾರದ ಎಪಿಸೋಡ್ನಲ್ಲಿ ಶುಭಾ ಪೂಂಜಾ ಹಾಗೂ ವಿಶ್ವ ಅವರುಗಳು ಸೇಫ್ ಆಗಿದ್ದರು. ಭಾನುವಾರದ ಸಂಚಿಕೆ ಆರಂಭಿಸಿದ ಸುದೀಪ್ ಅವರು ಮೊದಲು ರಘು ಗೌಡ ಅವರನ್ನು ಸೇಫ್ ಮಾಡಿದರು. ಆ ನಂತರ ಉಳಿದ ಇಬ್ಬರಲ್ಲಿ ಧನುಶ್ರಿ ಅವರನ್ನು ಹೊರಗೆ ಹೋಗಲು ಬಿಗ್ಬಾಸ್ ಸೂಚಿಸಿದರು ಅಂತೆಯೇ ಧನುಶ್ರಿ ಮೊದಲ ಸ್ಪರ್ಧಿಯಾಗಿ ಹೊರಗೆ ಬಂದರು.
ಫೆ.28ರಂದು ಅದ್ದೂರಿಯಾಗಿ ಆರಂಭವಾದ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಶೋಗೆ 17 ಜನ ಸ್ಪರ್ಧಿಗಳು ಆಯ್ಕೆ ಆಗಿದ್ದರು. ಧನುಶ್ರೀ ಅವರ ಎಲಿಮಿನೇಷನ್ ಬಳಿಕ ಈಗ 16 ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರಿದಿದೆ. ಎರಡನೇ ವಾರವೂ ಶಮಂತ್ ಬ್ರೋ ಗೌಡ ಕ್ಯಾಪ್ಟನ್ ಆಗಿ ಮುಂದುವರಿದಿದ್ದಾರೆ. ಮನೆಯಿಂದ ಹೊರಬಿದ್ದ ಧನುಶ್ರೀ ಅವರನ್ನು ಇನ್ನುಳಿದ ಸ್ಪರ್ಧಿಗಳು ಭಾವುಕವಾಗಿ ಬೀಳ್ಕೊಟ್ಟಿದ್ದಾರೆ.
ಹೊರಗೆ ಹೋಗುವ ಮುನ್ನ ಧನುಶ್ರಿ ಅವರಿಗೆ ವಿಶೇಷ ಅಧಿಕಾರವೊಂದನ್ನು ಬಿಗ್ಬಾಸ್ ನೀಡಿದರು. ಒಬ್ಬರನ್ನು ನಾಮಿನೇಷನ್ನಿಂದ ಉಳಿಸುವ ಅಧಿಕಾರ ನೀಡಿದರು. ಆ ಅಧಿಕಾರವನ್ನು ಬಳಸಿಕೊಂಡ ಧನುಶ್ರಿ ಅವರು ರಘು ಗೌಡ ಅವರನ್ನು ನಾಮಿನೇಷನ್ ನಿಂದ ಉಳಿಸಿದರು. ‘ರಘು ತಮ್ಮ ಸಾಮರ್ಥ್ಯವನ್ನು ಖಂಡಿತಾ ಸಾಬೀತುಪಡಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇದೆ. ಅದಕ್ಕಾಗಿ ಅವರಿಗೆ ಕಾಲಾವಕಾಶ ಬೇಕು’ ಎಂದು ತಮ್ಮ ಆಯ್ಕೆಗೆ ಧನುಶ್ರೀ ಕಾರಣ ನೀಡಿದರು.
ಶುಭಾ ಪೂಂಜಾ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಸುದ್ದಿಗಳು ಹರಿದಾಡಿತ್ತು, ಆದರೆ ಧನುಶ್ರಿ ಅವರು ಮೊದಲನೇ ಸ್ಪರ್ಧಿ ಆಗಿ ಹೊರಹೋಗಿದ್ದಾರೆ.