ನವದೆಹಲಿ: ಕಿರಿಯ ಕುಸ್ತಿಪಟು ಸಾಗರ್ ರಾಣಾ ಹತ್ಯೆ ಪ್ರಕರಣದ ಆರೋಪಿಯಾದ ಸುಶೀಲ್ ಕುಮಾರ್ ಗೆ ಈ ಬಾರಿ ತಿಹಾರ್ ಜೈಲಿನಲ್ಲಿ ಕುಳಿತು ಒಲಂಪಿಕ್ಸ್ ಕ್ರೀಡಾಕೂಟವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ಏಕೈಕ ಭಾರತೀಯ ಕ್ರೀಡಾಪಟುವಾಗಿರುವ ಸುಶೀಲ್ ಕುಮಾರ್, ತನಗೆ ಒಲಿಂಪಿಕ್ಸ್ ಕ್ರೀಡೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.
ಅದರಂತೆ ಕುಸ್ತಿಪಟು ಮಾಡಿಕೊಂಡ ಮನವಿಯನ್ನು ನ್ಯಾಯಲಯ ಹಾಗೂ ಜೈಲು ಅಧಿಕಾರಿಗಳು ಮಾನ್ಯ ಮಾಡಿದ್ದು, ಜೈಲಿನ ಅಧಿಕಾರಿಗಳು ಆತನಿಗೆ ಟಿವಿ ಹಂಚಿಕೆ ಮಾಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸುಶೀಲ್ ಕುಮಾರ್ ಪ್ರಸ್ತುತ ತಿಹಾರ್ ಜೈಲಿನಲ್ಲಿ ಕಾಲ ಕಳೆಯುತ್ತಿದ್ದು, ಎಲ್ಲವೂ ಸರಿ ಇದ್ದಿದ್ದರೆ ಈ ಬಾರಿ ನಡೆಯುತ್ತಿದ್ದ ಟೋಕಿಯೋ ಒಲಿಂಪಿಕ್ಸ್ ನಲ್ಲೂ ಭಾಗವಹಿಸಬಹುದಿತ್ತು.
ಸುಶೀಲ್ ಕುಮಾರ್ ಇರುವ ವಾರ್ಡ್ ನ ಕಾಮನ್ ಏರಿಯಾದಲ್ಲಿ ಇತರರೊಂದಿಗೆ ಟಿವಿಯನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಬಂಧಿಖಾನೆ ಪ್ರಧಾನ ನಿರ್ದೇಶಕ ಸಂದೀಪ್ ಗೋಯಲ್ ತಿಳಿಸಿದ್ದಾರೆ.