ಕೊಚ್ಚಿ: ಇಲ್ಲಿನ ತಿರುವನಂತಪುರಂನಲ್ಲಿರುವ ನೆಯ್ಯರ್ ಲಯನ್ ಸಫಾರಿ ಪಾರ್ಕಿನಿಂದ ಹುಲಿಯೊಂದು ತಪ್ಪಿಸಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.ಹುಲಿಯನ್ನು ಎರಡು ದಿನಗಳ ಹಿಂದೆ ವಯನಾಡಿನ ಪುಲ್ಪುಲ್ಲಿಯಿಂದ ನೆಯ್ಯರ್ ಸಫಾರಿ ಪಾರ್ಕ್ ಕರೆತರಲಾಗಿತ್ತು. ಶನಿವಾರ ಮಧ್ಯಾಹ್ನ ತನ್ನ ಪಂಜರದ ಕಂಬಿಗಳನ್ನು ಬಾಗಿಸಿ ತಪ್ಪಿಸಿಕೊಂಡಿದೆ ಎಂದು ವರದಿಯಾಗಿದೆ.
ಸ್ಥಳೀಯ ಜನರು ಮತ್ತು ಅಧಿಕಾರಿಗಳು ತೀವ್ರ ಶೋಧ ನಡೆಸಿದಾಗ ಪಾರ್ಕಿನ ಒಳಗಡೆಯೇ ಹುಲಿ ಕಾಣಿಸಿಕೊಂಡಿತ್ತು. ಆದರೆ ಅರವಳಿಕೆ ನೀಡಲು ಅಧಿಕಾರಿಗಳು ಬರುವಷ್ಟರಲ್ಲಿ ಹುಲಿ ಮತ್ತೆ ಕಾಣೆಯಾಗಿದೆ.ವಯನಾಡಿನಿಂದ ಕರೆತಂದಿದ್ದರಿಂದ ವಿಶೇಷ ಪಂಜರದಲ್ಲಿಟ್ಟು ಹುಲಿಯನ್ನು ನಿಗಾದಲ್ಲಿ ಇಡಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೀಗ ಹುಲಿ ನಾಪತ್ತೆಯಾಗಿರುವುದು ಸ್ಥಳೀಯ ಜನರಲ್ಲಿ ಆತಂಕ ಹುಟ್ಟುಹಾಕಿದೆ. ಸ್ಥಳೀಯರ ನಿವಾಸಗಳಿಗೆ ನುಗ್ಗಬಹುದು ಎಂಬ ಭಯದ ವಾತಾವರಣವಿದೆ.ಪಾರ್ಕಿನ ಯಾವುದೋ ಮೂಲೆಯಲ್ಲಿ ಹುಲಿ ಅಡಗಿರಬಹುದೆಂದು ಅರಣ್ಯಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಮತ್ತು ಸ್ಥಳೀಯರು ಎರಡು ಗುಂಪುಗಳಾಗಿ ಹುಲಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಡ್ರೋನ್ ಯಂತ್ರವನ್ನು ಸಹ ಬಳಸಿಕೊಳ್ಳಲಾಗಿದೆ.