ಮೇದಕ್(ತೆಲಂಗಾಣ) : ಜಿಲ್ಲೆಯ ಪಾಪಣ್ಣಪೇಟೆ ಹೋಬಳಿಯ ಪೊಡಿಚನ್ ಪಲ್ಲಿ ಗ್ರಾಮದಲ್ಲಿ ನಿನ್ನೆ ಕೊಳವೆಬಾವಿಗೆ ಬಿದ್ದಿದ್ದ ಮಗು ಸಂಜಯ್ ಸಾಯಿವರ್ಧನ್ ಎಂಬ ಬಾಲಕ ಮೃತಪಟ್ಟಿದ್ದಾನೆ.
ಬಾಲಕನ ಶವ 25 ಅಡಿ ಆಳದಲ್ಲಿ ಪತ್ತೆಯಾಗಿದೆ. ಲಾಕ್ಡೌನ್ ರಜೆ ಇದ್ದ ಕಾರಣ ಮಗು ಸಾಯಿ ವರ್ಧನ್ ಕೆಲವು ದಿನಗಳ ಹಿಂದೆ ತನ್ನ ಅಜ್ಜಿಯ ಮನೆಗೆ ಬಂದಿದ್ದಾನೆ. ಆದರೆ, ದುರದೃಷ್ಟವಶಾತ್ ಇಂದು ಬೋರ್ವೆಲ್ ಬಳಿ ಆಡುತ್ತಿದ್ದಾಗ ಆಯತಪ್ಪಿ ಬೋರ್ವೆಲ್ ಒಳಗೆ ಬಿದ್ದಿದ್ದಾನೆ.
ಬಾಲಕನನ್ನು ರಕ್ಷಿಸಲು ಅಧಿಕಾರಿಗಳು ಇನ್ನಿಲ್ಲದಂತೆ ಪ್ರಯತ್ನಿಸಿದ್ದರು. ಆದರೆ ಎಲ್ಲರ ಶ್ರಮ ಮತ್ತು ಪ್ರಾರ್ಥನೆ ಫಲಿಸಲಿಲ್ಲ. ರಕ್ಷಣಾ ಕಾರ್ಯಾಚರಣೆ ಸುಮಾರು 12 ಗಂಟೆಗಳ ಕಾಲ ಮುಂದುವರೆಯಿತಾದರೂ ಮಗು ಬದುಕಿ ಬರಲಿಲ್ಲ.
ಬಾಲಕ 25 ಅಡಿ ಆಳದಲ್ಲಿರಬಹುದೆಂದು ಭಾವಿಸಿ ಕೊಳವೆ ಬಾವಿಗೆ ಸಮಾನಾಂತರವಾಗಿ ಗುಂಡಿ ಅಗೆಯಲಾಯಿತು. ಆದರೆ ಆಗಲೇ ಮಗು ಪ್ರಾಣ ಕಳೆದುಕೊಂಡಿತ್ತು. ಈ ದುರಂತ ಘಟನೆಯಲ್ಲಿ ಬಾಲಕನ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರ ಆಕ್ರೋಶ ಮುಗಿಲು ಮುಟ್ಟಿದೆ.