ಮಂಗಳೂರು: ಇಲ್ಲಿನ ನೀರುಮಾರ್ಗದ ಶಾಂತಿಗುರಿಯ ಕೊದರಬ್ಬು, ತನ್ನಿಮಾನಿಗ, ರಾಹುಗುಳಿಗ ದೈವಸ್ಥಾನದ ಕಾಣಿಕೆ ಡಬ್ಬದಿಂದ ಹಣ ಕಳವು ಮಾಡಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ತಡವಾಗಿ ನಿನ್ನೆ ಘಟನೆ ಬೆಳಕಿಗೆ ಬಂದಿದೆ. ಮೂರು ಕಾಣಿಕೆ ಡಬ್ಬದಿಂದ ಸುಮಾರು 15 ಸಾವಿರ ರೂ. ನಗದು ಕಳವುಗೈದಿದ್ದಾರೆ ಎಂದು ದೂರಲಾಗಿದೆ.ಶನಿವಾರ ರಾತ್ರಿ 7ಕ್ಕೆ ದೈವಸ್ಥಾನದ ಬಾಗಿಲು ಹಾಕಲಾಗಿತ್ತು. ಭಾನುವಾರ ಬೆಳಗ್ಗೆ ಕಳವು ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಮುಖ್ಯ ರಸ್ತೆ ಬದಿಯಲ್ಲಿದ್ದ ಕಾಣಿಕೆ ಡಬ್ಬ, ದೈವಸ್ಥಾನದ ಹೊರಗಡೆಯಿದ್ದ ಕಾಣಿಕೆ ಡಬ್ಬ ಹಾಗೂ ದೈವಸ್ಥಾನದ ಬಾಗಿಲು ಮುರಿದು ಒಳಗೆ ನುಗ್ಗಿ ನಗದು ಕಳವುಗೈದಿದ್ದಾರೆ ಎಂದು ದೂರಲಾಗಿದೆ. ದೈವಸ್ಥಾನದ ಒಳಗಿದ್ದ 7 ಪವನ್ ಚಿನ್ನ ಮತ್ತು ಬೆಳ್ಳಿಯ ಇತರ ಸೊತ್ತುಗಳನ್ನು ಹಾಗೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ. ದೈವಸ್ಥಾನದಲ್ಲಿ ಹಾಕಲಾದ ಸಿಸಿ ಕ್ಯಾಮೆರಾ ಕೆಟ್ಟು ಹೋಗಿದೆ ಎಂದು ಪ್ರಕರಣ ದಾಖಲಿಸಿರುವ ಮಂಗಳೂರು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.