ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಒಂದು ಕಾಲದಲ್ಲಿ ಭಾರೀ ಸದ್ದುಮಾಡಿದ ನಕ್ಸಲ್ ಚಟುವಟಿಕೆ ಇದೀಗ ತಣ್ಣಗಾಗಿದೆ. ಅದರಲ್ಲೂ ಮಲೆನಾಡಿನ ನಕ್ಸಲ್ ಚಳುವಳಿಯ ಸೂತ್ರಧಾರ ಬಿ.ಜಿ ಕೃಷ್ಣಮೂರ್ತಿ, ಸಾವಿತ್ರಿ ಅರೆಸ್ಟ್ ಆಗುತ್ತಿದ್ದಂತೆ ಪೊಲೀಸರು ಕೂಡ ನಿರುಮ್ಮಳರಾಗಿದ್ದಾರೆ. ನಕ್ಸಲ್ ಸೂತ್ರಧಾರರ ಬಂಧನದ ಮೂಲಕ ಮಲೆನಾಡಿನಲ್ಲಿ ಕೆಂಪು ಉಗ್ರರ ನೆಲ ಕಳಚಿಬಿದ್ದಿದೆ. ಕೇರಳ ಪೊಲೀಸರಿಗೆ ಸಿಕ್ಕಿಬಿದ್ದ ನಕ್ಸಲ್ ನಾಯಕರು, ಇದೀಗ ಕಾಫಿನಾಡಿನ ಖಾಕಿಯ ಸುರ್ಪದಿನಲ್ಲಿದ್ದಾರೆ. ಅಷ್ಟಕ್ಕೂ ಕಾಫಿನಾಡಿನಿಂದ ಕೇರಳಕ್ಕೆ ನಕ್ಸಲ್ ನಾಯಕರು ಹೋಗಿದ್ದಾದ್ರೂ ಯಾಕೆ, ಮಲೆನಾಡಿನಲ್ಲಿ ನಕ್ಸಲ್ ಯುಗಾಂತ್ಯವಾಯ್ತಾ ಎನ್ನುವ ಪ್ರಶ್ನೆ ಮೂಡಿದೆ.
ಚಿಕ್ಕಮಗಳೂರು ಪಶ್ಚಿಮಘಟ್ಟಗಳ ರಮಣೀಯ ಪ್ರಕೃತಿಯ ಐಸರಿ .ಎತ್ತ ಕಣ್ಣಾಯಿಸಿದ್ರೂ ಅತ್ತ ಸುಂದರ ಪರಿಸರ ಕಣ್ಣಿಗೆ ರಾಚುತ್ತೆ. ಇದೇ ಪರಿಸರವೇ ಒಂದು ಕಾಲದಲ್ಲಿ ನಕ್ಸಲ್ ಹುಟ್ಟಿಗೆ ಕಾರಣವಾಯ್ತು. ನಕ್ಸಲ್ ಚಟುವಟಿಕೆ ಮಲೆನಾಡಿನಲ್ಲಿ ಬೇರೂರಲು ವೇದಿಕೆ ಮಾಡಿಕೊಡ್ತು ಅನ್ನೋದು ಕೂಡ ಅಷ್ಟೇ ಸತ್ಯನೇ.. ಹೌದು, ನಕ್ಸಲ್ ಸೂತ್ರಧಾರ ಬಿ.ಜಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಇದೇ ಕಾಡಿನಲ್ಲಿ ಭೂಗತರಾಗುವ ಮೂಲಕ ಪೊಲೀಸರಿಗೆ ಸೆಡ್ಡು ಹೊಡೆದು ಅನೇಕ ಯುವಕರನ್ನ ನಕ್ಸಲ್ ಲೋಕದಲ್ಲಿ ಸಕ್ರಿಯರಾಗಿಸಿದ್ರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಎನ್.ಆರ್ ಪುರ, ಕೊಪ್ಪದ ಸುತ್ತಮುತ್ತ ಅನೇಕ ವಿಧ್ವಂಸಕ ಕೃತ್ಯಗಳನ್ನ ಎಸಗಿ ಖಾಕಿಗೆ ಸವಾಲೆಸೆದಿದ್ರು. ಆ ಬಳಿಕ ನಕ್ಸಲ್ ನಿಗ್ರಹ ದಳ ಹುಟ್ಟಿಕೊಂಡ ಬಳಿಕ ನಮ್ಮ ಜಿಲ್ಲೆ, ರಾಜ್ಯದಿಂದಲೇ ಕಾಲ್ಕಿತ್ತ ನಕ್ಸಲ್ ಪಡೆ, ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಒರಿಸ್ಸಾ ಸೇರಿ ಹಲವೆಡೆ ತೆರಳಿ ಯುವಕ-ಯುವತಿಯರನ್ನ ನಕ್ಸಲ್ ಕಡೆ ಸೆಳೆದಿದ್ರು. ಹೀಗೆ ಒಂದು ಕಾಲದಲ್ಲಿ ಪೊಲೀಸರಿಗೆ ಸಿಂಹ ಸ್ವಪ್ನವಾಗಿದ್ದ ಬಿ.ಜಿ ಕೃಷ್ಣಮೂರ್ತಿ ಇದೀಗ ಪೊಲೀಸರ ಅತಿಥಿ !
ಎರಡು ದಶಕಗಳ ಹಿಂದೆ ಮಲೆನಾಡಿನ ನಕ್ಸಲ್ ಚಳುವಳಿ ಸೂತ್ರಧಾರ ಬಿ.,ಜಿ ಕೃಷ್ಣಮೂರ್ತಿಯ ಹೆಸರು ಕೇಳದವರೇ ಇಲ್ಲ. ಶೃಂಗೇರಿ, ಉಡುಪಿ, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಭಾಗಗಳ ಪೊಲೀಸರೂ ಕೂಡ ಇದೇ ಕೃಷ್ಣಮೂರ್ತಿಯ ಬೆನ್ನು ಬಿದ್ದಿದ್ದರು. ಹೀಗಿರುವಾಗ 2000ನೇ ಇಸವಿಯಲ್ಲಿ ಭೂಗತನಾದ ಈ ನಕ್ಸಲ್ ನಾಯಕ ಕೇರಳ, ಆಂಧ್ರದ ಕಡೆ ಮುಖಮಾಡಿದ್ರು. ಆ ವೇಳೆ ಕೃಷ್ಣಮೂರ್ತಿ ತಲೆಗೆ ಪೊಲೀಸ್ ಇಲಾಖೆ, ಐದು ಲಕ್ಷ ನಗದು ಬಹುಮಾನವೂ ಘೋಷಣೆ ಮಾಡಿತ್ತು. ಆ ನಕ್ಸಲ್ ನಾಯಕನ್ನು ಕೇರಳ ಪೊಲೀಸ್ರು ಮೂರು ತಿಂಗಳ ಹಿಂದೆಯಷ್ಟೇ ಬಂಧಿಸಿದ್ರು. ನಕ್ಸಲ್ ಚಳವಳಿ ಸೂತ್ರಧಾರನಾಗಿದ್ದ ಬಿ.ಜಿ ಕೃಷ್ಣಮೂರ್ತಿಯ ವಿರುದ್ಧ 53 ಪ್ರಕರಣಗಳು ದಾಲಾಗಿದೆ.
ಬಿ.ಜಿ ಕೃಷ್ಣಮೂರ್ತಿ ಬಂಧನದ ಜೊತೆಜೊತೆಗೆ 2001ರಿಂದಲೂ ಭೂಗತರಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸದ ಸಾವಿತ್ರಿ ಬಂಧನ ಕೂಡ ಆಗಿದೆ. ನಕ್ಸಲ್ ನಾಯಕಿ ಸಾವಿತ್ರಿಯನ್ನ ಬಂಧಿಸಿದ ಕೇರಳ ಪೊಲೀಸರು, ಅನೇಕ ಪ್ರಕರಣಗಳ ತನಿಖೆಗೆ ಕಾಫಿನಾಡಿನ ಪೊಲೀಸರಿಗೆ ಕೂಡ ಸಾವಿತ್ರಿ ಬೇಕಾಗಿದ್ದರಿಂದ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಇಬ್ಬರು ಕೂಡ ಬಿಗಿ ಪೊಲೀಸ್ ಬಂದ್ ಬಸ್ತ್ನಲ್ಲಿ ನ್ಯಾಯಾಲಯಗಳಿಗೆ ಹಾಜರಾಗಿ ವಿಚಾರಣೆಯನ್ನ ಎದುರಿಸುತ್ತಿದ್ದಾರೆ. ಸದ್ಯ ಇವರಿಬ್ಬರ ಬಂಧನದ ಮೂಲಕ ಮಲೆನಾಡಿನಲ್ಲಿ ಕೆಂಪು ಉಗ್ರರ ನೆಲೆಗೆ ಈಗ ಬ್ರೇಕ್ ಬಿದ್ದಂತಾಗಿದೆ…


