ಯಾದಗಿರಿ: ತಾಲೂಕಿನ ಮಂಡಗಳ್ಳಿ ಗ್ರಾಮದ ಮಲ್ಲಪ್ಪ ಅವರು ಕುರಿಸಾಕಾಣಿಕೆ ಮಾಡಲು ಕಳೆದ 10 ತಿಂಗಳ ಹಿಂದಷ್ಟೆ 30 ಕುರಿಗಳನ್ನು ಖರೀದಿಸಿದ್ದರು. ಮನೆ ಹತ್ತಿರದ ಕುರಿಹಟ್ಟಿಯಲ್ಲಿ ಕುರಿಗಳನ್ನು ಬಿಡಲಾಗುತ್ತಿತ್ತು. ರಾತ್ರಿ ದುಷ್ಕರ್ಮಿಗಳು ಕುರಿಗಳ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾರೆಂಬ ಆರೋಪ ವ್ಯಕ್ತವಾಗಿದೆ.
ಈ ಘಟನೆ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಯಾರೆಂದು ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಂದೆಗೆ ಮೈ ಹುಷಾರಿಲ್ಲವೆಂದು ಹಟ್ಟಿ ಬಿಟ್ಟು ಮನೆಯಲ್ಲಿ ಮಲಗಿದ್ದ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದೆ ಎಂದು ಸಂತ್ರಸ್ತ ಮಲ್ಲಪ್ಪ ತಿಳಿಸಿದ್ದಾರೆ. ಕಿಡಿಗೇಡಿಗಳು 16 ಕುರಿಗಳ ಕತ್ತು ಹೊಟ್ಟೆ ಸೀಳಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅಂದಾಜು 5 ಲಕ್ಷ ರೂ.ಮೌಲ್ಯದ ನಷ್ಟ ಉಂಟಾಗಿದ್ದು, ಉದ್ದೇಶ ಪೂರ್ವಕವಾಗಿ ಕುರಿಗಳನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಕುರಿಗಾಹಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು. ತಪ್ಪತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ದಲಿತ ಮುಖಂಡ ಶರಣರೆಡ್ಡಿ ಹತ್ತಿಗೂಡು ಒತ್ತಾಯಿಸಿದ್ದಾರೆ.