ಬೆಂಗಳೂರು: ತಹಶೀಲ್ದಾರ್ ಗಳು ವರ್ಗಾವಣೆಗೆ ಸಂಬಂಧಿಸಿದಂತೆ ಕೋರ್ಟ್ ತಡೆಯಾಜ್ಞೆ ಪಡೆದ ನಂತರ ಕಡ್ಡಾಯವಾಗಿ ಸರ್ಕಾರದಿಂದ ಮರು ಆದೇಶವನ್ನು ಪಡೆದ ನಂತರವೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸುತ್ತೋಲೆ ರವಾನಿಸಿದೆ.
ವರ್ಗಾವಣೆ ಸಂಬಂಧ ಕೋರ್ಟ್ ತಡೆಯಾಜ್ಞೆ ಪಡೆದ ಬಳಿಕ ಬಹುತೇಕ ತಹಶೀಲ್ದಾರ್ ಗಳು ಮರು ಆದೇಶ ಪಡೆಯದೇ ನೇರವಾಗಿ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ದೃಢೀಕೃತ ಪ್ರತಿಯೊಂದಿಗೆ ಸರ್ಕಾರದಿಂದ ಮರು ಆದೇಶ ಪಡೆದ ನಂತರವೇ ಹಿಂದೆ ಕರ್ತವ್ಯ ನಿರ್ವಹಿಸಿದ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಕಂದಾಯ ಇಲಾಖೆ ಸೂಚಿಸಿದೆ.
ಅಲ್ಲದೇ ಮರು ಆದೇಶ ಪಡೆಯದೇ ಬರುವ ತಹಶೀಲ್ದಾರ್ ಗಳನ್ನು ಡಿಸಿಗಳು ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳುವಂತಿಲ್ಲ ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯಿಂದ ಸೂಚನೆ ರವಾನಿಸಲಾಗಿದೆ.