ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2022ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 7 ವಿಕೆಟ್ಗಳ ಭರ್ಜರಿ ಗೆಲುವು ಪಡೆದಿದೆ. ಈ ಬೆನ್ನಲ್ಲೆ ಕರ್ನಾಟಕದ ಅಭಿಮಾನಿಗಳು ಫೈನಲ್ ಪಂದ್ಯಕ್ಕೆ ನಮಗೆ ಬೆಂಬಲಿಸಬೇಕೆಂದು ದೇವದತ್ ಪಡಿಕ್ಕಲ್ ಮನವಿ ಮಾಡಿದ್ದಾರೆ.
ಶುಕ್ರವಾರ ರಾತ್ರಿ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ ರಜತ್ ಪಾಟಿದಾರ್(57 ರನ್) ಅರ್ಧಶತಕದ ಹೊರತಾಗಿಯೂ ತನ್ನ ಪಾಲಿನ 20 ಓವರ್ಗಳಿಗೆ 157 ರನ್ಗಳಿಗೆ ಸೀಮಿತವಾಗಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ರಾಜಸ್ಥಾನ್, ಜೋಸ್ ಬಟ್ಲರ್(106) ಅವರ ಶತಕದ ಬಲದಿಂದ 18.1 ಓವರ್ಗಳಿಗೆ 3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಗೆಲುವಿನ ದಡ ಸೇರಿತ್ತು.
ಈ ಪಂದ್ಯದ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಹದಿನೈದನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ಗೆ ಪ್ರವೇಶ ಮಾಡಿತು. ಆ ಮೂಲಕ ಭಾನುವಾರ ಇದೇ ಮೈದಾನದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆಯುವ ಫೈನಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಕಾದಾಟ ನಡೆಸಲಿದೆ. ಗೆಲುವಿನ ಬಳಿಕ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೇವದತ್ ಪಡಿಕ್ಕಲ್, ರಾಜಸ್ಥಾನ್ ರಾಯಲ್ಸ್ ತಂಡ ಫೈನಲ್ ಪ್ರವೇಶ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಆರ್ಸಿಬಿ ಹಾಗೂ ಬೆಂಗಳೂರು ತಂಡದ ಅಭಿಮಾನಿಗಳಿಗೆ ಹಾರ್ಡ್ ಲಕ್ ಎಂದರು. ಇದರ ಜೊತೆಗೆ ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಹಣಾಹಣಿಯಲ್ಲಿ ಕರ್ನಾಟಕದ ಹುಡುಗರಿಗೆ ಆರ್ಸಿಬಿ ಅಭಿಮಾನಿಗಳು ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ