ಚಿಕ್ಕಮಗಳೂರು : ಜಮೀನು ಪಕ್ಕಾ ಪೋಡ್ ಮಾಡಿಕೊಡಲು ನಾಲ್ಕು ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಮೂಡಿಗೆರೆ ತಾಲೂಕು ಕಚೇರಿಯ ಸರ್ವೆ ಸೂಪರ್ವೈಸರ್ ಪ್ರಕಾಶ್ ಎಸಿಬಿ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಇಂದು ಸಂಜೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಗ್ರಾಮದ ಮಹೇಶ್ ಎಂಬವರ ಸರ್ವೆ ನಂಬರ್ 600 ರಲ್ಲಿ 37 ಎಕರೆ 34 ಗುಂಟೆ ಜಮೀನು ಇದ್ದು ಜಾಗದ ನಕ್ಷೆಗೂ ಮತ್ತು ಜಾಗದ ಅಳತೆಗೂ ವ್ಯತ್ಯಾಸ ಇದ್ದು ಹಾಲಿ ಜಮೀನಿನ ವಿಸ್ತೀರ್ಣಕ್ಕೆ ಸೇರಿ ಹೊಂದುವಂತೆ ನಕ್ಷೆ ತಯಾರಿಸಿ ಕೊಡಲು ನಾಲ್ಕು ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಸರ್ವೆ ಸೂಪರ್ವೈಸರ್ ಪ್ರಕಾಶ್ ಬಗ್ಗೆ ಚಿಕ್ಕಮಗಳೂರು ಎಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಅದರಂತೆ 5/2022 7(a) Of PC act 1988 ರಲ್ಲಿ ಪ್ರಕರಣ ದಾಖಲಿಸಿದ್ದು ಇಂದು ಸಂಜೆ ಮುಂಗಡವಾಗಿ ಒಂದು ಲಕ್ಷ ಲಂಚದ ಹಣ ಮೂಡಿಗೆರೆ ತಾಲೂಕು ಕಛೇರಿಯಲ್ಲಿ ಪ್ರಕಾಶ್ ಹಣವನ್ನು ದೂರುದಾರ ಮಹೇಶ್ ಬಳಿಯಿಂದ ಸ್ವೀಕರಿಸುತ್ತಿದ್ದಾಗ ಎಸಿಬಿ ಎಸ್ಪಿ ಸೈಮನ್ ನೇತೃತ್ವದಲ್ಲಿ ಡಿವೈಎಸ್ಪಿ ಸುನಿಲ್ ಕುಮಾರ್ ,ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ತಂಡ ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಸರ್ವೆ ಸೂಪರ್ವೈಸರ್ ಪ್ರಕಾಶ್ ಕಳೆದ ಒಂದು ವರ್ಷಗಳಿಂದ ಮೂಡಿಗೆರೆ ಸರ್ವೆ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಇದೀಗ ಆರೋಪಿಯನ್ನು ವಶಕ್ಕೆ ಪಡೆದು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.