ಉಡುಪಿ; ನನಗೆ ಪರೀಕ್ಷೆಯಲ್ಲಿ ಇಷ್ಟೇ ಅಂಕ ಬರಬೇಕು ಎಂದು ವಿದ್ಯಾರ್ಥಿಯೊಬ್ಬ ಬೊಬ್ಬರ್ಯ ದೈವಕ್ಕೆ ಬೇಡಿಕೆ ಇಟ್ಟ ಘಟನೆ ಹಕ್ಲಾಡಿ ಸಮೀಪದ ಹೊಳ್ಳಗೆ ಬೊಬ್ಬರ್ಯ ದೈವ ಸ್ಥಾನದಲ್ಲಿ ನಡೆದಿದೆ.
ಹಕ್ಲಾಡಿ ಸಮೀಪದ ಹೊಳ್ಳಗೆ ಬೊಬ್ಬರ್ಯ ದೈವ ಸ್ಥಾನದ ವಾರ್ಷಿಕ ಹಾಲು ಹಬ್ಬ ಹಾಗೂ ಕೆಂಡಸೇವೆ ಮಾರ್ಚ್ 14ರಂದು ನಡೆದಿತ್ತು. ಇದಾದ 10 ದಿವಸದ ಬಳಿಕ, ಮಾರ್ಚ್ 24ರಂದು ದೈವ ಸ್ಥಾನದ ಆಡಳಿತದವರು ಊರವರ ಉಪಸ್ಥಿತಿಯಲ್ಲಿ ದೇವರ ಕಾಣಿಕೆ ಡಬ್ಬಿ ತೆರೆದಿದ್ದಾರೆ. ಈ ವೇಳೆ ಭಕ್ತರು ಹಾಕಿರುವ ಕಾಣಿಕೆ ಹಣದ ಜೊತೆಗೆ ವಿದ್ಯಾರ್ಥಿ ಓರ್ವನ ಬೇಡಿಕೆ ಇರುವ ಪಟ್ಟಿ ದೊರಕಿದೆ.
ಈ ಚೀಟಿ ಫೋಟೋದಲ್ಲಿ “ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಬರಬೇಕು ದೇವರೇ ಹೊರ ಬೊಬ್ಬರ್ಯ; ಗಣಿತ ದಲ್ಲಿ 36 ರಿಂದ 39, ಇಂಗ್ಲೀಷ್- 37 ರಿಂದ 39 ಕನ್ನಡದಲ್ಲಿ 40, 39 ವಿಜ್ಞಾನ- 39, 38, ಹಿಂದಿ- 40, 39, ಸಮಾಜ ವಿಜ್ಞಾನ- 38, 37 ಮತ್ತೆ ಇದಕ್ಕಿಂತ ಕಡಿಮೆ ಅಂಕ ಬೇಡ ದೇವರೆ” ಎಂದು ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಮಾಡಿಸುವಂತೆ ಮನವಿ ಮಾಡಿರುವ ದೃಶ್ಯವನ್ನು ಕಾಣಬಹುದು. ವಿಳಾಸವಿಲ್ಲದ ಪತ್ರ ಬರೆದಿರುವುದು ವಿದ್ಯಾರ್ಥಿಯೋ ಇಲ್ಲ ವಿದ್ಯಾರ್ಥಿನಿಯೋ ಎನ್ನುವ ಗೊಂದಲಗಳಿವೆ. ಯಾವ ತರಗತಿ ಎಂದು ಬರೆದುಕೊಳ್ಳದೆ ಇದ್ದರೂ, ಸದ್ಯ ನಡೆಯುತ್ತಿರುವ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವವದ್ದೇ ಕೆಲಸ ಎಂದು ಅಂದಾಜಿಸಲಾಗಿದೆ. ಸದ್ಯ ಕಾಣಿಕೆ ಹುಂಡಿಯಲ್ಲಿ ದೊರೆತಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.