
ಬೆಳ್ತಂಗಡಿ: ವಿವಿಧ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ ಹಾಗೂ ಏತ ನೀರಾವರಿ ಯೋಜನೆಗಾಗಿ ಸರಕಾರ ರೂ. 240 ಕೋಟಿ ಬಿಡುಗಡೆಗೊಳಿಸಿದ್ದು, ಈ ಬಗ್ಗೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಯವರು ಮಾಹಿತಿ ನೀಡಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನ ನೀಡುವಂತೆ ಸರಕಾರದ ಗಮನಸೆಳೆಯಲಾಗಿತ್ತು. ಅದನ್ನು ಸರಕಾರ ಪರಿಗಣಿಸಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹ ಸಚಿವರು ಈ ಬಗ್ಗೆ ಪ್ರಸ್ತಾಪಿಸಿ ರೂ.240 ಕೋಟಿ ಅನುದಾನವನ್ನು ಘೋಷಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಮೊಗ್ರು ಗ್ರಾಮದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಇಳಂತಿಲ, ಬಂದಾರು, ಕಣಿಯೂರು, ಉರುವಾಲು, ಕಳಿಯ, ನ್ಯಾಯತರ್ಪು, ಓಡಿಲ್ನಾಳ, ಕುವೆಟ್ಟು ಗ್ರಾಮಗಳಲ್ಲಿ ನೀರಾವರಿ ಸೌಲಭ್ಯವನ್ನು ಅಭಿವೃದ್ಧಿಗೊಳಿಸಲು ಅನುದಾನ ಬಳಸಿಕೊಳ್ಳಲಾಗುವುದು ಎಂದಿದ್ದಾರೆ..
ಬೆಳ್ತಂಗಡಿ ತಾಲೂಕಿನಲ್ಲಿ ಅನೇಕ ಐತಿಹಾಸಿಕ ಕೆರೆಗಳಿದ್ದು ಅವುಗಳನ್ನು ಜಲಮೂಲವಾಗಿಯೂ ಉಪಯೋಗಿಸುವ ಅವಕಾಶವಿದೆ.ಇನ್ನೂ ಕೆಲವು ಕೆರೆಗಳನ್ನು ಪ್ರವಾಸೋದ್ಯಮ ಕೇಂದ್ರವಾಗಿಯೂ ಆಕರ್ಷಕಗೊಳಿಸಬಹುದು.ಆ ನಿಟ್ಟಿನಲ್ಲಿ ಗುರುವಾಯನಕೆರೆಯ ಕೆರೆ ರಾಷ್ಟ್ರೀಯ- ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇದ್ದು, ಇಲ್ಲಿ ಮೊದಲ ಆದ್ಯತೆಯಲ್ಲಿ ಅಭಿವೃದ್ಧಿ ಪಡಿಸಲೂ ಈ ಪ್ಯಾಕೇಜ್ನಲ್ಲಿ ಅನುದಾನ ಉಪಯೋಗ ವಾಗಲಿದೆ ಎಂದು ಮಾಹಿತಿ ಲಭಿಸಿದೆ.


