ಮಂಗಳೂರು: ಜೀವಾವಧಿ ಶಿಕ್ಷೆಯ ಭಯದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿ 16 ವರ್ಷಗಳ ಬಳಿಕ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
2005ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚಂದ್ರಕಾಂತ್ ಪೂಜಾರಿ ಬಂಧಿತ ಆರೋಪಿ. 2005ರಲ್ಲಿ ಪೆರ್ಮುದೆ ಗ್ರಾಮದಲ್ಲಿ ವಿಶ್ವನಾಥ್ ಹಾಗೂ ಅಮಿನ್ ಎಂಬುವವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ದಾಂಧಲೆ ನಡೆಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದರು. ತಲೆಗೆ ಬಲವಾಗಿ ಬಾಟ್ಲಿಯಿಂದ ಹೊಡೆದಿದ್ದರು. ಇದೇ ವಿಚಾರಕ್ಕೆ ಅಂದೇ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದೇ ತನಿಖೆ ನಡೆಸಿದಾಗ ಯೋಗೀಶ್ ಎಂಬಾತ ಸಿಕ್ಕಿಬಿದ್ದಿದ್ದ, ಚಂದ್ರಕಾಂತ್ ಎಸ್ಕೇಪ್ ಆಗಿದ್ದ.
ಅಂದಿನಿಂದ ಸಾಕಷ್ಟು ಪ್ರಯತ್ನ ನಡೆಸಿ, ತನಿಖೆಯನ್ನ ಚುರುಕುಗೊಳಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಆತನನ್ನ ಹುಡಕಿದ್ದು, ಆತ ಮುಂಬೈನಲ್ಲಿ ಅಡಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಆಮೇಲೆ ಆತನ ಜಾಡು ಹಿಡಿದು ಹೊರಟ ಪೊಲೀಸರಿಗೆ ಆತ ಅಂಧೇರಿಯಲ್ಲಿ ವ್ಯಾಪಾರ ಮಾಡುತ್ತಿದ್ದದ್ದು ಕಂಡು ಬಂದಿದೆ. ಮುಂಬೈನಲ್ಲಿ ವಶಕ್ಕೆ ಪಡೆದಿದ್ದಾರೆ.
ಸುಮಾರು 16 ವರ್ಷಗಳ ನಂತರ ಈ ಕೇಸ್ ಗೆ ಮುಕ್ತಿ ಸಿಕ್ಕಿದೆ. ಅಂತು ಅಂದಿನಿಂದ ಬಿಟ್ಟು ಬಿಡದೆ ತನಿಖೆ ನಡೆಸಿ ಕಡೆಗೂ ಅರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.