ಮೈಸೂರು: ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಮುಖ ನೋಡೋದಕ್ಕೂ ಬಾರದೆ ಅನಾಥ ಹೆಣವೆಂದ ಮಗ ಬಳಿಕ ಅಪ್ಪನ ಬಳಿ ದುಡ್ಡು ಸಿಕ್ಕಿದೆ ಎಂದಾಗ ನಮಗೆ ತಲುಪಿಸಿ ಎಂದು ಅಮಾನವೀಯತೆ ಮೆರೆದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ 55 ವರ್ಷದ ವ್ಯಕ್ತಿ ಕೋವಿಡ್ ನಿಂದ ಮೃತಪಟ್ಟಿದ್ದರು. ಅವರು ಒಬ್ಬರೇ ವಾಸವಾಗಿದ್ದರಿಂದ ವಾರ್ಡ್ ಕಾರ್ಪೊರೇಟರ್ ಕೆ ವಿ ಶ್ರೀಧರ್ ಎಂಬವರು ಮೃತ ವ್ಯಕ್ತಿಯ ಮಗನಿಗೆ ಕರೆ ಮಾಡಿ ನಿಮ್ಮ ತಂದೆ ಕೋವಿಡ್ ನಿಂದ ಮೃತಪಟ್ಟಿದ್ದಾರೆ ಅಂತ್ಯ ಸಂಸ್ಕಾರಕ್ಕೆ ಬರುತ್ತೀರಾ ಎಂದು ಕೇಳಿದ್ದಾರೆ. ಆಗ ಆತ ಇಲ್ಲ ಬರಲ್ಲ ಎಂದಿದ್ದಾನೆ. ಆಗ ಕಾರ್ಪೋರೇಟರ್ ಸರಿ ನಾವು ಅನಾಥ ಹೆಣವೆಂದು ನಾವೇ ಅಂತ್ಯಕ್ರಿಯೆ ನೆರವೇರಿಸುತ್ತೇವೆ ಎಂದಿದ್ದಾರೆ. ಆಗ ಮಗ ಸರಿ ಎಂದು ಕರೆ ಕಟ್ ಮಾಡಿದ್ದಾನೆ.
ಸ್ವಲ್ಪ ಹೊತ್ತಿನ ಚಿತಾಗಾರಕ್ಕೆ ಕೊಂಡೊಯ್ಯುವ ಮೊದಲು ವಾಹನಕ್ಕೆ ಶಿಫ್ಟ್ ಮಾಡುವಾಗ ಮತ್ತೆ ಮಗನಿಗೆ ಕರೆ ಮಾಡಿದ ಕಾರ್ಪೋರೇಟರ್ ಮೊಬೈಲ್ ಸ್ಪೀಕರ್ ಆನ್ ಮಾಡಿಟ್ಟು ನಿಮ್ಮ ತಂದೆಯ ಬಳಿ 6 ಲಕ್ಷ ರೂಪಾಯಿ ನಗದು, ಎಟಿಎಂ ಕಾರ್ಡುಗಳು, ಮೂರು ಮೊಬೈಲ್ ಗಳು ಹಾಗೇ ದಾಖಲೆಗಳಿವೆ ಕೆಲವು ಎಂದಿದ್ದಾರೆ. ಆಗ ಮೃತ ವ್ಯಕ್ತಿಯ ಮಗ ಹಣ, ಮೊಬೈಲ್ ಮತ್ತು ಎಟಿಎಂ ಕಾರ್ಡನ್ನು ಕಳುಹಿಸಿಕೊಡಿ ಎಂದಿದ್ದಾನೆ. ಆಗ ಕೋಪಗೊಂಡ ಕಾರ್ಪೋರೇಟರ್, ನಿನಗೆ ನಾಚಿಗೆಯಾಗುವುದಿಲ್ಲವೇ, ನಿನಗೆ ಅಪ್ಪನ ದುಡ್ಡು, ಎಟಿಎಂ ಕಾರ್ಡು ಎಲ್ಲ ಬೇಕು, ನಿನ್ನ ತಂದೆಯ ಅಂತ್ಯಸಂಸ್ಕಾರ ಮಾಡಲು ನಿನಗೆ ಸಾಧ್ಯವಿಲ್ಲವೇ, ಇದೇನಾ ನಿನ್ನ ಸಂಸ್ಕೃತಿ ಎಂದು ಕೇಳಿದಾಗ ಮಗ, ಇಲ್ಲ ಸರ್ ಎನ್ನುತ್ತಾನೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.