ಮಂಗಳೂರು: ಮನೆಗೆ ರಸ್ತೆ ಇಲ್ಲದೇ ದಾರುಣವಾಗಿ ಅನಾರೋಗ್ಯ ಪೀಡಿತ ಮಹಿಳೆಯೋರ್ವರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಕೆರೆ ಹಿತ್ತಿಲಿನಲ್ಲಿ ನಡೆದಿದೆ.
ಕೆರೆಹಿತ್ತಿಲು ಪೂವಣಿ ಗೌಡ ಎಂಬುವವರ ಪತ್ನಿ ಕಮಲರವರು ವಿವಿಧ ಖಾಯಿಲೆಯಿಂದ ಬಳಲುತ್ತಿದ್ದರು. ಮೊನ್ನೆ ರಾತ್ರಿ ಇವರ ಆರೋಗ್ಯ ತೀವ್ರವಾಗಿ ಹದೆಗೆಟ್ಟಿತ್ತು. ದೇವರ ಮೇಲೆ ಭಾರಹಾಕಿ ತಂದೆ-ಮಗ ಬೆಳಗ್ಗೆಯವರೆಗೂ ಕಾದು ಜೀವ ಉಳಿಸಲು ಅವರನ್ನು ಬೆಂಚಿಗೆ ಕಟ್ಟಿ ಎತ್ತಿಕೊಂಡು ಹೋಗಿದ್ದಾರೆ.ಕಿರಿದಾದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗಲಾರದೇ ಬೆಂಚಿಗೆ ಕಟ್ಟಿ ಎತ್ತಿಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಮಹಿಳೆ ಸಾವನ್ನಪ್ಪಿದ್ದಾರೆ.
ಪೂವಣಿ ಗೌಡರ ಮನೆಗೆ ರಸ್ತೆ ಸಮರ್ಪಕವಾಗಿಲ್ಲ. ಸ್ಥಳೀಯರೊಬ್ಬರ ಖಾಸಗಿ ತೋಟದಲ್ಲಿ ನಡೆದುಕೊಂಡು ಹೋಗಬೇಕಾದ ಸ್ಥಿತಿ. ವೈಯಕ್ತಿಕ ಮನಸ್ತಾಪದಿಂದ ಸ್ಥಳೀಯ ವ್ಯಕ್ತಿ ಕೇವಲ ಕಾಲುದಾರಿಯನ್ನು ಮಾತ್ರ ಬಿಟ್ಟು ಕೊಟ್ಟಿದ್ದರು. ಕೇವಲ 200 ಮೀಟರ್ ರಸ್ತೆಗಾಗಿ ಕುಟುಂಬ ಪರದಾಡಿದೆ. ಇದೀಗ ತಾಯಿಯನ್ನು ಎತ್ತಿಕೊಂಡು ಹೋಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಪರ್ಯಾಸವೆಂದರೆ ರಸ್ತೆಗಾಗಿ ಹಲವು ಬಾರಿ ಪಂಚಾಯತ್ ಗೆ ಮನವಿ ಮಾಡಿದರೂ ಬೇಡಿಕೆ ಇಲ್ಲಿಯವರೆಗೂ ಈಡೇರದೇ ಜೀವ ಬಲಿ ತೆಗೆದುಕೊಳ್ಳಲು ಕಾರಣವಾಗಿದೆ