ಹೊಸದಿಲ್ಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮಗಳು ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಇರಾನಿ ಅವರನ್ನು ಸಂಪುಟದಿಂದ ಕಿತ್ತು ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ. ಈ ಆರೋಪವನ್ನು ಸ್ಮೃತಿ ಇರಾನಿ ತಳ್ಳಿಹಾಕಿದ್ದಾರೆ.
ತಮ್ಮ ಕಕ್ಷಿದಾರೆ ಗೋವಾದಲ್ಲಿ ಸಿಲ್ಲಿ ಸೌಲ್ಸ್ ಗೋವಾ ಎಂಬ ಹೆಸರಿನ ಯಾವುದೇ ರೆಸ್ಟೋರೆಂಟ್ ಅನ್ನು ನಡೆಸುತ್ತಿಲ್ಲ ಅಥವಾ ಅದರ ಮಾಲೀಕತ್ವ ಹೊಂದಿಲ್ಲ. ಈಗ ಆರೋಪಿಸಿರುವಂತೆ ಯಾವುದೇ ಅಧಿಕಾರಿಯಿಂದ ಯಾವುದೇ ಶೋಕಾಸ್ ನೋಟಿಸ್ ಕೂಡ ಸ್ವೀಕರಿಸಿಲ್ಲ ಎಂದು ಸ್ಮೃತಿ ಇರಾನಿ ಅವರ ಮಗಳು ಕೀರತ್ ನಗ್ರಾ ಪರ ವಕೀಲರು ಹೇಳಿಕೆ ನೀಡಿದ್ದಾರೆ.
ವಿವಿಧ ಸ್ಥಾಪಿತ ಹಿತಾಸಕ್ತಿಗಳು ತಪ್ಪಾದ, ನಿಷ್ಪ್ರಯೋಜಕ, ದುರುದ್ದೇಶಪೂರ್ವಕ ಮತ್ತು ಮಾನಹಾನಿಕರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಮೂಲಕ ನಮ್ಮ ಕಕ್ಷಿದಾರರ ತಾಯಿ, ಪ್ರತಿಷ್ಠಿತ ರಾಜಕಾರಣಿ ಸ್ಮೃತಿ ಇರಾನಿ ವಿರುದ್ಧದ ರಾಜಕೀಯ ದ್ವೇಷವನ್ನು ಸಾಧಿಸಲು ಪ್ರಯತ್ನಿಸುತ್ತಿವೆ. ಈ ಪ್ರತಿ ಆರೋಪಗಳೂ ಸುಳ್ಳುಗಳ ಕಂತೆಯಲ್ಲಿ ರಚನೆಯಾಗಿದೆ” ಎಂದು ವಕೀಲರು ಆರೋಪಿಸಿದ್ದಾರೆ
ಆದ್ರೆ ಇದು ಬಹಳ ಗಂಭೀರ ವಿಷಯ ಎಂದಿರುವ ಕಾಂಗ್ರೆಸ್, ಬಾರ್ಗೆ ನೀಡಲಾಗಿರುವ ಶೋಕಾಸ್ ನೋಟಿಸ್ನ ಪ್ರತಿಯೊಂದನ್ನು ಹಂಚಿಕೊಂಡಿದೆ. ನೋಟಿಸ್ ನೀಡಿದ ಅಬಕಾರಿ ಅಧಿಕಾರಿಯನ್ನು ಮೇಲಿನ ಅಧಿಕಾರಿಗಳ ಒತ್ತಡದ ಬಳಿಕ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿರುವುದಾಗಿ ಆರೋಪಿಸಿದೆ. ಸ್ಮೃತಿ ಇರಾನಿ ಅವರ ಕುಟುಂಬದ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪಗಳಿವೆ ಮತ್ತು ಅವರ ಮಗಳು ಗೋವಾದಲ್ಲಿ ‘ನಕಲಿ ಪರವಾನಗಿ’ಯೊಂದಿಗೆ ಬಾರ್ ಉಳ್ಳ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರೆ ಪವನ್ ಖೇರಾ ಹೇಳಿದ್ದಾರೆ.
2021ರ ಮೇ ತಿಂಗಳಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಸ್ಮೃತಿ ಇರಾನಿ ಅವರ ಮಗಳ ಪರವಾನಗಿ ಇದೆ. ಈ ಪರವಾನಗಿಯನ್ನು ಗೋವಾದಲ್ಲಿ 2022ರ ಜೂನ್ನಲ್ಲಿ ಪಡೆದುಕೊಳ್ಳಲಾಗಿತ್ತು. ಆದರೆ ಪರವಾನಗಿಯಲ್ಲಿ ಹೆಸರು ಇರುವ ವ್ಯಕ್ತಿಯು 13 ತಿಂಗಳ ಹಿಂದೆಯೇ ಮೃತಪಟ್ಟಿದ್ದಾರೆ. ಇದು ಅಕ್ರಮ” ಎಂದು ಆರೋಪಿಸಿದ್ದಾರೆ. ಗೋವಾ ನಿಯಮಗಳ ಪ್ರಕಾರ, ಒಂದು ರೆಸ್ಟೋರೆಂಟ್, ಒಂದು ಬಾರ್ ಪರವಾನಗಿಯನ್ನು ಮಾತ್ರ ಪಡೆದುಕೊಳ್ಳಬಹುದಾಗಿದೆ. ಆದರೆ ಈ ರೆಸ್ಟೋರೆಂಟ್ ಬಳಿ ಎರಡು ಪರವಾನಗಿಗಳಿವೆ ಎಂದು ಹೇಳಿದ್ದಾರೆ.