ಕೇರಳ: ಸೆಪ್ಟೆಂಬರ್ ತಿಂಗಳಲ್ಲಿ ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದ ಕೇಸಿಗೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಈ ಇಬ್ಬರು ಮಹಿಳೆಯರನ್ನು ನರಬಲಿ ಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ದಂಪತಿ ಸೇರಿದಂತೆ ಮೂವರನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಿರುವಲ್ಲಾದ ನಿವಾಸಿ ಮಸಾಜ್ ಥೆರಪಿಸ್ಟ್ ಭಗವತ್ ಸಿಂಗ್, ಆತನ ಪತ್ನಿ ಲೈಲಾ ಹಾಗೂ ಪೆರುಂಬವೂರು ಮೂಲದ ರಶೀದ್ ಅಲಿಯಾಸ್ ಮಹಮ್ಮದ್ ಶಾಫಿ ಎಂದು ಗುರುತಿಸಲಾಗಿದೆ. ನರಬಲಿ ನೀಡಿದರೆ ಹಣದ ಸಮಸ್ಯೆ ನೀಗುತ್ತದೆ ಎಂಬ ಕಾರಣಕ್ಕೆ ಆರೋಪಿಗಳು , ರಸ್ತೆ ಬದಿಯಲ್ಲಿ ಲಾಟರಿ ಟಿಕೆಟ್ ಮಾರಿ ಜೀವನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ನರಬಲಿ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ’ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ನಾಗರಾಜು ಚಕಿಲಂ ತಿಳಿಸಿದ್ದಾರೆ.
ಆರೋಪಿಗಳು ಇಬ್ಬರು ಮಹಿಳೆಯರ ಗಂಟಲು ಸೀಳಿ ಹತ್ಯೆ ಮಾಡಿದ್ದು, ಅವರ ದೇಹದ ವಿವಿಧ ಭಾಗಗಳನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿ, ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾ ಎನ್ನುವ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಹೂಳಿದ್ದಾರೆ. ಮೃತ ಮಹಿಳೆಯರು 50 ವರ್ಷ ವಯಸ್ಸಿನವರಾಗಿದ್ದು, ಕಡವಂತಾರ ಮತ್ತು ಕಾಲಡಿ ಗ್ರಾಮದ ನಿವಾಸಿಗಳಾಗಿದ್ದು, ಈ ವರ್ಷದ ಜೂನ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದರು. ಪೊಲೀಸರು ತನಿಖೆ ನಡೆಸಿದಾಗ ನರಬಲಿಯ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.