ಬೆಂಗಳೂರು: ರಾಷ್ಟ್ರಗೀತೆ ಹಾಗೂ ‘ವಂದೇ ಮಾತರಂ’ ಗೀತೆ ವಿಚಾರದಲ್ಲಿ ಬಿಜೆಪಿಯದ್ದು ಕೇವಲ ರಾಜಕೀಯ ಪ್ರಹಸನ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್, “ತಾಕತ್ತಿದ್ದರೆ ಬಿಜೆಪಿಯವರು ಸಂಘದ ಶಾಖೆಗಳಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆಯನ್ನು ಹಾಡಿ ತೋರಿಸಲಿ” ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸಿ ಮಾತನಾಡಿದ ಅವರು, “ವಂದೇ ಮಾತರಂ ಗೀತೆಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ಬಿಜೆಪಿಯವರೇ ನಿಜವಾದ ದೇಶದ್ರೋಹಿಗಳು. ಇವರು ಏನೇ ಮಾಡಿದರೂ, ನಮ್ಮನ್ನು ಜೈಲಿಗೆ ಹಾಕಲಿ, ಗಲ್ಲಿಗೇರಿಸಲಿ ಅಥವಾ ಫಾಸಿಗೇರಿಸಲಿ – ನಾವು ಹಾಡುವುದು ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ. CWC ಸಭೆಯಲ್ಲಿ ಅತ್ಯಂತ ಸರಿಯಾದ ನಿರ್ಧಾರವನ್ನೇ ಕೈಗೊಳ್ಳಲಾಗಿದೆ” ಎಂದರು.
ಇದೇ ವೇಳೆ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಬಿಜೆಪಿಯವರೆಲ್ಲ ಕಂಗನಾ ರಣಾವತ್ ಅವರ ಅಭಿಮಾನಿಗಳು, ಚಡ್ಡಿ ಹಾಕುವವರು. ಬೇಕಿದ್ದರೆ ಅವರು ಕಂಗನಾ ಅವರ ಹಾಡನ್ನೇ ಸಂಸತ್ತಿಗೆ ತಂದು ರಾಷ್ಟ್ರಗೀತೆ ಮಾಡಿದರೂ ಆಶ್ಚರ್ಯವಿಲ್ಲ. ಸಂಸತ್ತಿನಲ್ಲಿ ಸತ್ಯ ಎದುರಿಸುವ ಧೈರ್ಯವೂ ಇಲ್ಲದ ನರಹೇಡಿಗಳು ಬಿಜೆಪಿಯವರು” ಎಂದು ಕಿಡಿಕಾರಿದರು.


